ಚನ್ನಪಟ್ಟಣ: ಇಲ್ಲಿನ ಮಂಗಾಡಹಳ್ಳಿ ಬಳಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ರೈತರೊಬ್ಬರ ಮೇಲೆ ಮಂಗಳವಾರ ಒಂಟಿಸಲಗ ದಾಳಿ ಮಾಡಿ ಗಾಯಗೊಳಿಸಿದೆ.
ರೈತ ವಿಷಕಂಠಯ್ಯ ಗಾಯಗೊಂಡವರು. ಕೂದಲೆಳೆ ಅಂತರದಲ್ಲಿ ಅವರು ಸಾವಿನಿಂದ ಪಾರಾಗಿದ್ದಾರೆ. ಮಂಗಾಡಹಳ್ಳಿ ಹಾಗೂ ಸಾದರಹಳ್ಳಿ ಮಾರ್ಗದ ಮಧ್ಯದಲ್ಲಿರುವ ತಮ್ಮ ಜಮೀನಿನಲ್ಲಿ ಉಳುಮೆ ಮಾಡುವಾಗ ಆನೆ ದಾಳಿ ನಡೆಸಿ ಗಾಯಗೊಳಿಸಿದೆ.
‘ಉಳುಮೆ ಮಾಡುತ್ತಿದ್ದಾಗ ಜಮೀನಿನ ಪಕ್ಕದ ಬೇಲಿಯ ಮರೆಯಿಂದ ಬಂದ ಆನೆ, ಏಕಾಏಕಿ ದಾಳಿ ಮಾಡಿ, ಸೊಂಡಿಲಿನಿಂದ ಎತ್ತಿ ಎಸೆಯಿತು. ಪರಿಣಾಮ ನೆಲಕ್ಕೆ ಬಿದ್ದು ಪ್ರಜ್ಞೆ ತಪ್ಪಿದೆ. ಅಷ್ಟಕ್ಕೆ ಆನೆ ಮುಂದೆ ಹೋಗಿದೆ. ದೇವರ ದಯೆಯಿಂದ ಬದುಕಿಕೊಂಡೆ’ ಎಂದು ರೈತ ವಿಷಕಂಠಯ್ಯ ತಿಳಿಸಿದರು. ಅವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿ ಮನ್ಸೂರ್ ಆಲಿಖಾನ್ ಹಾಗೂ ಸಿಬ್ಬಂದಿ ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.