ADVERTISEMENT

ಕಾಡಾನೆ ದಾಳಿ: ಫಸಲು ನಾಶ

ಪರಿಹಾರಕ್ಕೆ ಅರಣ್ಯ ಇಲಾಖೆಗೆ ಮನವಿ l ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 11:41 IST
Last Updated 3 ಜೂನ್ 2020, 11:41 IST
ಅಚ್ಚಲು ಗ್ರಾಮದಲ್ಲಿ ಪಾರ್ಥ ಜಿ. ಗೌಡ ಅವರ ತೋಟದಲ್ಲಿ ಕಾಡಾನೆಗಳು ಮಾವಿನ ಮರ ನಾಶಗೊಳಿಸಿರುವುದು
ಅಚ್ಚಲು ಗ್ರಾಮದಲ್ಲಿ ಪಾರ್ಥ ಜಿ. ಗೌಡ ಅವರ ತೋಟದಲ್ಲಿ ಕಾಡಾನೆಗಳು ಮಾವಿನ ಮರ ನಾಶಗೊಳಿಸಿರುವುದು   

ಕನಕಪುರ: ತಾಲ್ಲೂಕಿನ ಕಬ್ಬಾಳು ಮತ್ತು ಅಚ್ಚಲು ಅರಣ್ಯ ಪ್ರದೇಶ ವ್ಯಾಪ್ತಿಯ ಅಚ್ಚಲು, ಬೊಮ್ಮನಹಳ್ಳಿ, ಯಲವಳ್ಳಿ ಗ್ರಾಮಗಳಲ್ಲಿ ಕಾಡಾನೆ ಹಿಂಡು ದಾಳಿ ನಡೆಸಿ ಮಾವಿನ ಮರ ಮತ್ತು ರಾಗಿ ಬೆಳೆ ನಾಶ ಮಾಡಿದೆ.

ಅಚ್ಚಲು ಗ್ರಾಮದ ಪಾರ್ಥ.ಜಿ.ಗೌಡ ಎಂಬುವರಿಗೆ ಸೇರಿದ ಸುಮಾರು 20 ಮಾವಿನ ಮರಗಳನ್ನು ಕಾಡಾನೆಗಳು ನಾಶಗೊಳಿಸಿವೆ. ಬೊಮ್ಮನಹಳ್ಳಿ ಗ್ರಾಮದ ಶಿವಣ್ಣ ಮತ್ತು ರಾಮಣ್ಣ ಎಂಬುವರ ರಾಗಿ ಫಸಲನ್ನು ತಿಂದುಹಾಕಿವೆ. ಎಲವಳ್ಳಿ ಗ್ರಾಮದಲ್ಲಿ ಹಲಸಿನ ಮರ, ಬಾಳೆಗಿಡಗಳನ್ನು ನಾಶ ಮಾಡಿವೆ.

ಕಬ್ಬಾಳು ಮತ್ತು ಅಚ್ಚಲು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು ಸುತ್ತಮುತ್ತಲ ಪ್ರದೇಶಗಳಲ್ಲಿ ನಿರಂತರ ದಾಳಿ ನಡೆಸಿ ಬೆಳೆಗಳನ್ನು ನಾಶ ಮಾಡುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ADVERTISEMENT

‘ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳು ಜಮೀನುಗಳಿಗೆ ನುಗ್ಗಿ ದಾಳಿ ಮಾಡಿದಾಗ ಅವುಗಳನ್ನು ಓಡಿಸುವ ಪ್ರಯತ್ನ ಮಾಡುತ್ತಾರೆ.ಆದರೆ, ಆನೆಗಳು ಕಾಡಿನೊಳಗೆ ಹೋದರು ರಾತ್ರಿ ವೇಳೆ ಮತ್ತೆ ಜಮೀನುಗಳಿಗೆ ನುಗ್ಗುತ್ತಿವೆ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕಾಡಾನೆಗಳು ನಾಡಿನತ್ತ ಬರದಂತೆ ಶಾಶ್ವತವಾಗಿ ತಡೆಗಟ್ಟಬೇಕು. ಫಸಲು ನಿರಂತರ ನಾಶವಾಗುತ್ತಿದೆ. ಕಷ್ಟಪಟ್ಟು ಬೆಳೆದರೂ ಬೆಳೆ ಕೈಗೆ ಗಿಟ್ಟುತ್ತಿಲ್ಲ. ಈ ಭಾಗದಲ್ಲಿ ರೈತರು ಬೇಸಾಯ ಮಾಡುವುದೇ ದುಸ್ತರವಾಗಿದೆ ಎಂದು ರೈತ ಪಾರ್ಥ ಜಿ.ಗೌಡ ಹೇಳಿದರು.

ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಮನವಿಯನ್ನು ಸಲ್ಲಿಸಿರುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.