ರಾಮನಗರ: ಶ್ರೀಗಂಧದ ಅರಣ್ಯ ಕೃಷಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡಿದ್ದು, ಕೇಂದ್ರ ಸರ್ಕಾರದಿಂದ ನರೇಗಾ ಯೋಜನೆ ಅಡಿ ರೈತರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ತಿಳಿಸಿದರು.
ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ಶ್ರೀಗಂಧ ಕೃಷಿ ಮಾಡುತ್ತಿರುವ ಜಮೀನುಗಳಿಗೆ ಭೇಟಿ ನೀಡಿ, ಶ್ರೀಗಂಧದ ಬಗ್ಗೆ ಮಾಹಿತಿ ಪಡೆದ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ಕರ್ನಾಟಕದಲ್ಲಿ ಶ್ರೀಗಂಧಕ್ಕೆ ಮಹತ್ವದ ಸ್ಥಾನವಿದೆ. ದೇಶ–ವಿದೇಶಗಳಲ್ಲೂ ಇದಕ್ಕೆ ಬೇಡಿಕೆ ಇದೆ. ಆದರೆ ಈಚಿನವರೆಗೂ ಇದನ್ನು ಬೆಳೆಯಲು ಅನುಮತಿ ಇರಲಿಲ್ಲ. ವರ್ಷಗಳ ಹಿಂದಷ್ಟೇ ಸರ್ಕಾರ ಇದಕ್ಕೆ ಅನುಮತಿ ನೀಡಿರುವುದು ಉತ್ತಮ ಬೆಳವಣಿಗೆ. ಇದನ್ನು ಬೆಳೆಯುವ ರೈತರಿಗೆ ಇನ್ನಷ್ಟು ಉತ್ತೇಜನ ಸಿಗಬೇಕಿದೆ. ನರೇಗಾ ಅಡಿ ಈಗಾಗಲೇ ಇದಕ್ಕೆ ನೆರವು ನೀಡಲಾಗುತ್ತಿದೆ’ ಎಂದರು.
‘ಶ್ರೀಗಂಧ ರೈತರಿಗೆ ಉತ್ತೇಜನ ನೀಡುವ ಜೊತೆಗೆ ಮರಗಳಿಗೆ ರಕ್ಷಣೆಯನ್ನೂ ನೀಡಬೇಕು. ಆಗ ಮಾತ್ರ ರೈತರು ನಿರ್ಭೀತಿಯಿಂದ ಬೆಳೆಯಲು ಸಾಧ್ಯ’ ಎಂದು ಸಂಸದ ಡಿ.ಕೆ. ಸುರೇಶ್ ಸಚಿವರಲ್ಲಿ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.