ಪ್ರಾತಿನಿಧಿಕ ಚಿತ್ರ
ಬಿಡದಿ (ರಾಮನಗರ): ಇಲ್ಲಿನ ವಾರ್ಡ್ 4ರ ಕೆಂಚನಕುಪ್ಪೆ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ನಿರಂತರವಾಗಿ ಪಟಾಕಿ ಸಿಡಿಸುತ್ತಿದ್ದನ್ನು ಪ್ರಶ್ನಿಸಿ, 112ಗೆ ಕರೆ ಮಾಡಿ ದೂರು ಕೊಟ್ಟ ವ್ಯಕ್ತಿ ಮೇಲೆ ಗ್ರಾಮದ ಯುವಕರ ಗುಂಪು ಹಲ್ಲೆ ನಡೆಸಿದೆ.
ಕರ್ನಾಟಕ ರಾಜ್ಯ ಸಾಮಾಜಿಕ ಕಾರ್ಯಕರ್ತರ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷರು ಆಗಿರುವ ಗ್ರಾಮದ ಸುರೇಶ್ ಕೆ.ಬಿ ಹಲ್ಲೆಗೊಳಗಾದವರು. ಘಟನೆ ಕುರಿತು ಸುರೇಶ್ ನೀಡಿದ ದೂರು ಆಧರಿಸಿ, ಬಿಡದಿ ಠಾಣೆ ಪೊಲೀಸರು ಗ್ರಾಮದ ಧನು, ನಾಗರಾಜು, ಹರೀಶ, ಪ್ರಸನ್ನ ಹಾಗೂ ಆಯೋಜಕರ
ವಿರುದ್ಧ ಎನ್ಸಿಆರ್ ಮಾಡಿಕೊಂಡಿದ್ದಾರೆ.
‘ಗಣೇಶೋತ್ಸವದಲ್ಲಿ ಪಟಾಕಿ ಸಿಡಿಸಬಾರದು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೂ, ಯುವಕರು ಬೀದಿಗಳಲ್ಲಿ ಮತ್ತು ರಸ್ತೆಯಲ್ಲಿ ಶಾಲೆಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಲೆಕ್ಕಿಸದೆ ರಾಜಾರೋಷವಾಗಿ ಪಟಾಕಿ ಸಿಡಿಸುತ್ತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದರು. ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಮೂಲಕ ನಿಯಮ ಉಲ್ಲಂಘನೆ ತಡೆಯಬೇಕು’ ಎಂದು ಸುರೇಶ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.