ADVERTISEMENT

ಆಧುನಿಕತೆಯಲ್ಲಿ ಮಸುಕಾದ ಜಾನಪದ ಮೌಲ್ಯ: ಡಾ. ಶಿವಚಿತ್ತಪ್ಪ ಅಭಿಪ್ರಾಯ

ವಿಚಾರ ಸಂಕಿರಣದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ. ಶಿವಚಿತ್ತಪ್ಪ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 2:46 IST
Last Updated 30 ಜುಲೈ 2025, 2:46 IST
   

ರಾಮನಗರ: ‘ಆಧುನಿಕತೆಯ ಪ್ರಭಾವದಿಂದಾಗಿ ಜಾನಪದ ಹಾಗೂ ಅದರೊಳಗೆ ಮಿಳಿತವಾಗಿರುವ ಮೌಲ್ಯಗಳು ಮಸುಕಾಗಿ ತಮ್ಮ ಮೌಲಿಕತೆ ಕಳೆದುಕೊಳ್ಳುತ್ತಿವೆ. ಜಾನಪದ ನೃತ್ಯ ಮತ್ತು ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಭಾರತದ ಒಟ್ಟು ಸ್ವರೂಪವನ್ನು ಅವಲೋಕಿಸಬೇಕಾದ ಅವಶ್ಯಕತೆ ಇದೆ’ ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ. ಶಿವಚಿತ್ತಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ನ ಅಧೀನ ಸಂಸ್ಥೆ ಇಂಡಿಯನ್ ಫೋಕ್ಲೋರ್ ರೀಸರ್ಚರ್ಸ್ ಆರ್ಗನೈಸೇಷನ್ (ಐಎಫ್‌ಆರ್‌ಒ) ಮತ್ತು ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕೆರೆಮೇಗಳದೊಡ್ಡಿಯಲ್ಲಿರುವ ಟ್ರಸ್ಟ್‌ನ ಮುದ್ದುಶ್ರೀ ದಿಬ್ಬದಲ್ಲಿ ‘ಜಾನಪದ ರಂಗಭೂಮಿ ಪೌರಾಣಿಕ ಮತ್ತು ಮೌಖಿಕ ಪರಂಪರೆ’ ಕುರಿತು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿಯ ವೈಟ್ ಲೋಟಸ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್ ಪುರುಷೋತ್ತಮ ಶೆಟ್ಟಿ ಮಾತನಾಡಿ, ‘ಜಗತ್ತಿನ ವಿವಿಧ ದೇಶಗಳಲ್ಲಿ ಪ್ರವಾಸ ಮಾಡುತ್ತಾ, ಅಲ್ಲಿನ ಜಾನಪದದ ಬಗೆಗಿನ ಕಾಳಜಿಯನ್ನು ಗಮನಿಸಿದ್ದೇನೆ. ಅಲ್ಲಿಗೆ ಹೋಲಿಸಿದರೆ, ನಮ್ಮ ಪಾರಂಪರಿಕ ವಸ್ತು–ವಿಷಯಗಳನ್ನು ಸಂರಕ್ಷಿಸಬೇಕಾದ ಅವಶ್ಯಕತೆ ಇದೆ ಎಂಬುದನ್ನು ಮನಗಂಡಿರುವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಪ್ರದೇಶಗಳಲ್ಲಿ ಕೆಲಸ ಮಾಡುವ ಆಲೋಚನೆಯಲ್ಲಿದ್ದೇನೆ’
ಎಂದರು.

ADVERTISEMENT

ರಾಮನಗರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎಸ್. ಗಂಗಾಧರ್, ‘ರಾಘವಾಂಕನ ಹರಿಶ್ಚಂದ್ರ ಕಾವ್ಯದ ಹಿನ್ನೆಲೆಯಲ್ಲಿ ನೈತಿಕತೆ ಮತ್ತು ತಾಯ್ತನವನ್ನ ನೋಡಬೇಕಿದೆ. ಪಾತಿವ್ರತ್ಯದ ಬಗ್ಗೆ ಚರ್ಚಿಸುವಾಗ ಅಹಲ್ಯೆಯನ್ನು ಯಾವ ನೆಲೆಯಲ್ಲಿ ಸಮಾಜ ನಿಲ್ಲಿಸುತ್ತದೆ ಎಂಬುದು ಕೂಡ ಮುಖ್ಯ’ ಎಂದು ಹೇಳಿದರು.

‘ಮಹಾಭಾರತದಲ್ಲಿ ‌ಪಾಂಡವರು ಮತ್ತು ಕೌರವರ ಹುಟ್ಟಿನ ಹಿನ್ನೆಲೆ ಒಂದೊಂದು ರೀತಿಯಲ್ಲಿದೆ. ಇಷ್ಟಾದರೂ ಮಹಾಭಾರತದ ಸೂತ್ರಧಾರಿಯಾದ ಕೃಷ್ಣ ವಿಚಾರವಂತರು, ಪ್ರಾಮಾಣಿಕರು, ನೀತಿವಂತರ ಪರ ನಿಲ್ಲುತ್ತಾನೆಯೇ ಹೊರತು, ಯಾರ ಹುಟ್ಟಿನ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ಕೇರಳ ಕಣ್ಣೂರಿನ ನಿವೃತ್ತ ಪ್ರಾಂಶುಪಾಲ ಡಾ. ರಥಿ ತಂಪಟ್ಟಿ, ‘ಸಣ್ಣ ಸಣ್ಣ ವಿಷಯಗಳಲ್ಲೂ ಬಹುತ್ವ ಅಡಗಿರುತ್ತದೆ. ಉದಾಹರಣೆಗೆ ಸ್ನಾನವನ್ನು ಕುರಿತು ಅಧ್ಯಯನ ನಡೆಸಿದರೆ ವಿಪುಲ ಮಾಹಿತಿಗಳು ಲಭ್ಯವಾಗಬಲ್ಲವು. ಸ್ನಾನದಲ್ಲಿ ಹದಿನಾಲ್ಕು ಬಗೆಯ ಸ್ನಾನಗಳಿವೆ. ಪ್ರತಿಯೊಂದಕ್ಕೂ ತನ್ನದೇ ಹಿನ್ನೆಲೆಯಿದೆ’ ಎಂದು ಹೇಳಿದರು.

ಇಫ್ರೊ ಸಂಸ್ಥಾಪಕ ಅಧ್ಯಕ್ಷ ದ್ರಾವಿಡಿಯನ್ ಯೂನಿವರ್ಸಿಟಿಯ ಡಾ. ಎಂ.ಎನ್. ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಡಾ. ಗೋವಿಂದವರ್ಮರಾಜ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ. ಎಂ. ಬೈರೇಗೌಡ ಟ್ರಸ್ಟ್ ಕಾರ್ಯಗಳನ್ನು ವಿವರಿಸಿದರು. ಚನ್ನಪಟ್ಟಣ ಸರ್ಕಾರಿ ಪದವಿ ಕಾಲೇಜಿನ ಹಿಂದಿ ಪ್ರಾಧ್ಯಾಪಕ ಪ್ರಭು ಉಪಾಸೆ ಅವರನ್ನು ಸನ್ಮಾನಿಸಲಾಯಿತು.

ಕೇರಳ ಜಾನಪದ ಅಕಾಡೆಮಿ ಕಾರ್ಯದರ್ಶಿ ಡಾ. ಎ.ವಿ. ಅಜಯ್ ಕುಮಾರ್, ತೆಲುಗು ಜಾನಪದ ಗಾಯಕಿ ಸರಳ ಧರ್ಮಾವರಂ, ಚಿತ್ರದುರ್ಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಎಂ. ಗುರುನಾಥ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ಇದ್ದರು. ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರದ 60ಕ್ಕೂ ಹೆಚ್ಚು ಸಂಶೋಧಕರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

ಜಾನಪದದಲ್ಲಿನ ನಂಬಿಕೆ ಮತ್ತು ಮೂಢನಂಬಿಕೆಗಳಿಗೆ ಹೊರತಾಗಿ ಅನ್ಯ ಶಿಸ್ತುಗಳ ಜೊತೆಗೆ ತೌಲನಿಕ ಅಧ್ಯಯನ ನಡೆಯಬೇಕಿದೆ. ಅವಶ್ಯಕತೆಯಿದೆ. ವೈದ್ಯರು ಖಗೋಳಶಾಸ್ತ್ರಜ್ಞರು ಮನೋವಿಜ್ಞಾನಿಗಳು ಸೇರಿದಂತೆ ವಿವಿಧ ಮಾನವಿಕ ಶಾಖೆಗಳೊಡನೆ ಚರ್ಚೆಯ ಚರ್ಚೆಯ ಅಗತ್ಯವಿದೆ
– ಪ್ರೊ. ವ.ನಂ. ಶಿವರಾಮು ಶೈಕ್ಷಣಿಕ ನಿರ್ದೇಶಕ ಇಫ್ರೊ ಜಾನಪದ ಮಹಾವಿದ್ಯಾಲಯ

‘ನೈತಿಕ ಸ್ಥಿತಿ ಒಂದೇ ರೀತಿ’

ಜಾನಪದವನ್ನು ಪೂರ್ಣ ಪ್ರಮಾಣದಲ್ಲಿ ಅವಲೋಕಿಸುವಾಗ ಎಲ್ಲಾ ಭಾಷೆಗಳಲ್ಲಿನ ನೈತಿಕ ಸ್ಥಿತಿ ಒಂದೇ ತೆರನಾಗಿರುವುದು ಅರಿವಿಗೆ ಬರುತ್ತಾ ಹೋಗುತ್ತದೆ. ಇದೊಂದು ರೀತಿಯಲ್ಲಿ ಒಂದರೊಳಗೊಂದು ಬೆರೆತಿರುವಂತೆ. ಬಾಲ್ಯದ ದಿನಗಳಲ್ಲಿ ಆ ನೆಲೆಯಲ್ಲಿಯೇ ನಾವೆಲ್ಲರೂ ಆಲೋಚನೆ ಮಾಡುತ್ತಿವು. ಆದರೆ ದಿನಗಳು ಕಳೆದಂತೆ ನಮ್ಮ ನಮ್ಮಲ್ಲೇ ಗೋಡೆಗಳ ನಿರ್ಮಾಣ ಆರಂಭವಾಯಿತು. ಇದೀಗ ಆ ಗೋಡೆಗಳನ್ನು ಕೆಡವಿ ವಿಶಾಲವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಿದೆ’ ಎಂದು ಮಂಡ್ಯ ವಿವಿ ಕುಲಪತಿ ಡಾ. ಶಿವಚಿತ್ತಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.