ಚನ್ನಪಟ್ಟಣ: ಪ್ರತಿಯೊಬ್ಬರು ಜೀವನದಲ್ಲಿ ಉನ್ನತ ಗುರಿ ಸಾಧಿಸಬೇಕಾದರೆ ಗುರುಗಳ ಮಾರ್ಗದರ್ಶನ ಅತ್ಯವಶ್ಯಕ ಎಂದು ರಾಘವೇಂದ್ರ ಮಠದ ಪ್ರಧಾನ ಅರ್ಚಕ ಶ್ರೀಹರಿ ಆಚಾರ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಕುವೆಂಪುನಗರದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಗುರುಪೂಜೆ ಹಾಗೂ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮಾನವ ಪರಿಪಕ್ವತೆ ಹೊಂದಲು ಸದ್ಗುರುಗಳು ಅತ್ಯವಶ್ಯಕ’ ಎಂದರು.
‘ಮನುಷ್ಯನಲ್ಲಿರುವ ದುರ್ಗುಣಗಳನ್ನು ತೊಡೆದುಹಾಕಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಮಹತ್ವದ್ದು. ಜೀವನದಲ್ಲಿ ಅಚಲವಾದದ್ದನ್ನು ಸಾಧಿಸಲು ಗುರಿ ಇಟ್ಟುಕೊಳ್ಳಬೇಕು. ಆ ಗುರಿ ತಲುಪಲು ಗುರುವಿನ ಮಾರ್ಗದರ್ಶನ ಪಡೆದರೆ ಯಶಸ್ಸು ಖಚಿತ. ಎಲ್ಲರು ಗುರುವಿನ ಮಾರ್ಗದರ್ಶನ ಪಡೆದುಕೊಳ್ಳಬೇಕು’ ಎಂದರು.
ಯೋಗಶಿಕ್ಷಕಿ ರಾಧಿಕಾ ರವಿಕುಮಾರ್ ಗೌಡ ಮಾತನಾಡಿ, ‘ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಗುರು ಮಹತ್ವದ ಪಾತ್ರ ವಹಿಸುತ್ತಾನೆ. ತಮ್ಮೊಳಗಿನ ಕತ್ತಲೆಯನ್ನು ತೊಡೆದು ಬೆಳಕಿನ ಹಾದಿಗೆ ಕರೆದೊಯ್ಯುವ ಗುರುವಿನ ಪಾತ್ರ ಮಹತ್ವವಾದದ್ದು. ಗುರುವಿನ ಗುಲಾಮನಾಗುವ ತನಕ ದೊರಯದಣ್ಣ ಮುಕುತಿ ಎಂಬ ದಾಸರ ವಾಕ್ಯ ನಮ್ಮೆಲ್ಲರಿಗೂ ಆದರ್ಶವಾಗಬೇಕು’ ಎಂದರು.
‘ಇಂದಿನ ದಿನಗಳಲ್ಲಿ ಗುರುವಿನ ಮಹತ್ವ ತಿಳಿಯದ ಯುವ ಸಮುದಾಯ ಗುರುಗಳಿಗೆ ಅಗೌರವ ತೋರುವ ಕೆಲಸ ಮಾಡುತ್ತಿದೆ. ಯುವಸಮುದಾಯವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗುವಲ್ಲಿ ಗುರುವಿನ ಕಾರ್ಯ ಮಹತ್ವದ್ದಾಗಿದೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆ ವತಿಯಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ್ ಗೌಡ, ಸಹಾಯಕ ಪ್ರಾಧ್ಯಾಪಕ ಮಧುಸೂಧನಾಚಾರ್ಯ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಮಾತಾ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.