ಹಾರೋಹಳ್ಳಿ: ಆಧುನಿಕ ಜೀವನ ಶೈಲಿ, ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಪ್ರತಿಯೊಬ್ಬರೂ ಆರೋಗ್ಯದತ್ತ ಕಾಳಜಿ ವಹಿಸಿ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ಹಾರೋಹಳ್ಳಿಯ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಹಾರೋಹಳ್ಳಿ ವರ್ತಕರ ಸಂಘ, ಲಘು ಉದ್ಯೋಗ ಭಾರತಿ, ರೋಟರಿ ಕ್ಲಬ್, ರೋಟರಿ ಟ್ರಸ್ಟ್, ಕಲ್ಪವೃಕ್ಷ ಕೋ ಆಪರೇಟಿವ್ ಸೊಸೈಟಿ, ಹಾರೋಹಳ್ಳಿ ನಾಗರಿಕರ ಹಿತ ಸಂರಕ್ಷಣಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಪೌರ ಕಾರ್ಮಿಕರಿಗೆ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಸುತ್ತ ಸ್ವಚ್ಛ ಪರಿಸರ ಮತ್ತು ನೆಮ್ಮದಿ ಅವಶ್ಯಕ. ನಮ್ಮ ದೇಶದಲ್ಲಿ ಹೃದಯಾಘಾತ, ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಪಾರ್ಶ್ವವಾಯು, ಒಂಟಿತನ ಸಾಂಕ್ರಾಮಿಕ ರೋಗಗಳಾಗಿ ಮಾರ್ಪಟ್ಟಿವೆ. ದೇಶದಲ್ಲಿ ಪ್ರತಿ ವರ್ಷ 30 ಲಕ್ಷ ಮಂದಿ ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ಜೀವನ ಶೈಲಿ ಬದಲಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ಆಹಾರದಲ್ಲಿ ಬಿಳಿ ವಸ್ತುಗಳಾದ ಉಪ್ಪು, ಸಕ್ಕರೆ, ಪಾಲಿಶ್ ಅಕ್ಕಿ ಇವುಗಳಿಂದ ದೂರವಿರಿ. ನಾವು ತಿನ್ನುವ ಆಹಾರದಲ್ಲಿ ನಮ್ಮ ಆರೋಗ್ಯ ಅಡಗಿದೆ. ಫಾಸ್ಟ್ಫುಡ್ಗಳಿಂದ ದೂರವಿರಿ. ಕೈ ಚೆನ್ನಾಗಿದ್ದರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 50 ಯುನಿಟ್ ರಕ್ತ ಸಂಗ್ರಹವಾಗಿದೆ. ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ವರ್ತಕರ ಸಂಘದ ಅಧ್ಯಕ್ಷ ಮುರಳೀಧರ್, ನಾಗರಿಕ ಹಿತರಕ್ಷಣ ಸಮಿತಿಯ ಶ್ರೀನಿವಾಸ್, ರೋಟರಿಯ ಡಾ.ಪ್ರಾಣೇಶ್, ನಾಗರಾಜು, ಲಘು ಉದ್ಯೋಗ ಭಾರತಿಯ ನಾಗರಾಜು, ಸೆಲ್ವಂ, ಈರೇಗೌಡ, ಡಾ.ಚಂದ್ರಶೇಖರ್, ಮೋಟಪ್ಪ, ಸುಬ್ರಹ್ಮಣ್ಯ, ಜಿ.ನಾಗರಾಜು, ಶೇಷಾದ್ರಿ ರಾಮು, ಎರೆಹಳ್ಳಿ ಶಶಿ, ಪ್ರಭಾಕರ್, ಉಮಾಪತಿ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.