ಹಾರೋಹಳ್ಳಿ (ಕನಕಪುರ): ‘ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಆರೋಗ್ಯ, ನೆಮ್ಮದಿ ದೊರೆಯಲಿದೆ’ ಎಂದು ಚಿಕ್ಕಕಲ್ಬಾಳ್ ಮಠದ ಶಿವಾನಂದ ಶಿವಾಚಾರ್ಯ ಹೇಳಿದರು.
ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಚಿಕ್ಕಕಲ್ಬಾಳ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಕೊಕ್ಕೋ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೊಕ್ಕೋ ಮತ್ತು ಕಬಡ್ಡಿ ನಮ್ಮ ಗ್ರಾಮೀಣ ಕ್ರೀಡೆಗಳು. ಈ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚಿನ ಆರೋಗ್ಯ ವೃದ್ಧಿಯಾಗುತ್ತದೆ. ದೇಹವು ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯು ಬೇಕಿದೆ’ ಎಂದರು.
ಕೊಟ್ಟಗಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎಸ್. ಸುರೇಶ್ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಮಟ್ಟದ ಕ್ರಿಡಾಕೂಟ ಏರ್ಪಡಿಸಿರುವುದು ನಿಜಕ್ಕೂ ಸಂತಸದ ಸಂಗತಿ. ಇಂತಹ ಕ್ರೀಡೆಗಳು ನಡೆಯುವುದರಿಂದ ಗ್ರಾಮೀಣ ಕೀಡಾಪಟುಗಳಿಗೆ ಹೆಚ್ಚಿನ ಚೈತನ್ಯ ದೊರೆಯುತ್ತದೆ. ನಮ್ಮಲ್ಲಿರುವ ಪ್ರತಿಭೆಗಳು ಅನಾವರಣಗೊಳ್ಳಲು ಸಹಕಾರಿ’ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಯಸಂದ್ರ ರವಿ ಮಾತನಾಡಿ, ’ಯುವಕರು ಜವಾಬ್ದಾರಿ ಮರೆತು ಹೆಚ್ಚಾಗಿ ಮೊಬೈಲ್ನಲ್ಲಿ ಮುಳುಗಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಹೆಚ್ಚಿನ ಸಮಯ ಕಳೆಯುವುದರ ಬದಲು ಇಂತಹ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಕ್ರೀಡೆಗಳು ಯುವಕರಲ್ಲಿ ಸ್ಪರ್ಧಾ ಮನೋಭಾವ ಮತ್ತು ನಾಯಕತ್ವ ಗುಣಗಳನ್ನು ಹುಟ್ಟಿಹಾಕುತ್ತವೆ’ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ರತ್ನಮ್ಮ ಸಿದ್ದರಾಜು, ಚಿಕ್ಕಕಲ್ಬಾಳ್ ವಿಎಸ್ಎಸ್ಎನ್ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಪುಟ್ಟಸ್ವಾಮಿ, ಪಂಚಾಯಿತಿ ಸದಸ್ಯ ಶಂಭುಲಿಂಗೇಗೌಡ, ಹಾಲಿನ ಡೇರಿ ಅಧ್ಯಕ್ಷ ನಂಜುಂಡಸ್ವಾಮಿ, ಮುಖಂಡ ನಾಗೇಶ್, ಚಿಕ್ಕಕಲ್ಬಾಳ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ರಾಜಣ್ಣಗೌಡ, ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ತಿಪ್ಪಣ್ಣ, ಶ್ರೀಬಸವೇಶ್ವರ ಗೆಳೆಯರ ಬಳಗದವರು ಇದ್ದರು.
ದೈಹಿಕ ಶಿಕ್ಷಕರಾದ ಕೃಷ್ಣಪ್ಪ, ಕೆ.ಟಿ.ಸುರೇಶ್, ಸಂಜು ಎಡಮಲೆ, ಎಸ್.ವೈ.ಸುರೇಶ್ ಪಂದ್ಯ ನಡೆಸಿಕೊಟ್ಟರು. ಚಿಕ್ಕಕಲ್ಬಾಳ್ ನ ಸಿ.ಕೆ.ಬಿ ಲಯನ್ಸ್, ಯಂಗ್ಸ್ಟಾರ್, ಯಂಗ್ ಟೈಗರ್ಸ್, ಯುವ ಪ್ರತಿಭೆ, ದೊಡ್ಡಾಲಹಳ್ಳಿ ಕಾಲೇಜು, ಕನಕಪುರ ರೂರಲ್ ಪದವಿ ಕಾಲೇಜು ಮತ್ತು ಪದವಿಪೂರ್ವ ಕಾಲೇಜು, ಮುದುವಾಡಿ ಕಾಲೇಜು ಸೇರಿದಂತೆ ಒಟ್ಟು 10 ತಂಡಗಳು ಪಾಲ್ಗೊಂಡಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.