ADVERTISEMENT

ಮಾಗಡಿ: ಭೈರವನ ದುರ್ಗದ ಸ್ಮಾರಕ ಸಂರಕ್ಷಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 2:53 IST
Last Updated 1 ನವೆಂಬರ್ 2020, 2:53 IST
ಮಾಗಡಿ ಕುದೂರಿನ ಭೈರವನ ದುರ್ಗವನ್ನು ಜೆಸಿಬಿ ಬಳಸಿ ಸ್ಮಾರಕ ನಾಶ ಮಾಡುತ್ತಿರುವುದನ್ನು ತೋರಿಸಿದ ಕೆ.ಆರ್‌.ಯತಿರಾಜು.
ಮಾಗಡಿ ಕುದೂರಿನ ಭೈರವನ ದುರ್ಗವನ್ನು ಜೆಸಿಬಿ ಬಳಸಿ ಸ್ಮಾರಕ ನಾಶ ಮಾಡುತ್ತಿರುವುದನ್ನು ತೋರಿಸಿದ ಕೆ.ಆರ್‌.ಯತಿರಾಜು.   

ಕುದೂರು(ಮಾಗಡಿ): ‘ಭೈರವನ ದುರ್ಗದ ಚಾರಿತ್ರಿಕ ಸ್ಮಾರಕಗಳನ್ನು ಸಂರಕ್ಷಿಸಲು ಸರ್ಕಾರ ಮುಂದಾಗಬೇಕು’ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌.ಎಂ. ಕೃಷ್ಣಮೂರ್ತಿ ಆಗ್ರಹಿಸಿದರು.

ವರನಟ ಡಾ.ರಾಜ್‌ಕುಮಾರ್‌ ಅಭಿಮಾನಿ ಬಳಗದಿಂದಭೈರವನ ದುರ್ಗದ ಮೇಲೆ ಕನ್ನಡ ರಾಜ್ಯೋತ್ಸವದ ಅಂಗವಾಗಿ 65 ಅಡಿ ಎತ್ತರದ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ದುರ್ಗದ ತುತ್ತತುದಿಯಲ್ಲಿ ಕನ್ನಡ ಬಾವುಟ ಹಾರಾಡುವುದನ್ನು ನೋಡಿದರೆ ನಾಡಿನ ಗತವೈಭವಗಳು ನೆನಪಾಗುತ್ತವೆ. ವಿಜಯನಗರ ಸಾಮ್ರಾಜ್ಯದ ಗಡಿಯಾಗಿದ್ದ ಮಾಗಡಿ ತಾಲ್ಲೂಕಿನಲ್ಲಿ ಭೈರವನ ದುರ್ಗವು ಸ್ಥಳೀಯ ಪಾಳೇಗಾರರು, ಧರ್ಮಪ್ರಭು ಕೆಂಪೇಗೌಡ, ಟಿಪ್ಪುಸುಲ್ತಾನ್‌ ಆಳ್ವಿಕೆಯ ಕಾಲದಲ್ಲಿ ಉತ್ತುಂಗದಲ್ಲಿತ್ತು ಎಂಬುದು ಇತಿಹಾಸದ ದಾಖಲೆಗಳಿಂದ
ತಿಳಿದುಬರುತ್ತದೆ ಎಂದರು.

ADVERTISEMENT

ಭೈರವನ ದುರ್ಗದ ಸುತ್ತಲಿನ ಭೂಮಿಯನ್ನು ಖಾಸಗಿ ವ್ಯಕ್ತಿಗಳು ವಶಪಡಿಸಿಕೊಂಡಿ
ದ್ದಾರೆ. ಜೆಸಿಬಿ ಬಳಸಿ ದುರ್ಗದಲ್ಲಿನ ಸ್ಮಾರಕಗಳು, ಕಲ್ಯಾಣಿಯನ್ನು ನಾಶ ಮಾಡುತ್ತಿರುವುದು ಶೋಚನೀಯ. ಭೈರವನ ದುರ್ಗವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕು. ತಲಸ್ಪರ್ಶಿ ಅಧ್ಯಯನ ನಡೆಸಬೇಕು. ದುರ್ಗದ ಐತಿಹ್ಯಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಕೆಲಸವನ್ನು ಸರ್ಕಾರ ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು
ಆಗ್ರಹಿಸಿದರು.

ಕುದೂರು ಭೈರವನ ದುರ್ಗದ ಮೇಲಿರುವ ಕೋಟೆ ಆಂಜನೇಯಸ್ವಾಮಿಗೆ ಶನಿವಾರ ವರನಟ ಡಾ.ರಾಜ್‌ಕುಮಾರ್‌ ಅಭಿಮಾನಿ ಬಳಗದಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು, ಗ್ರಾಮಸ್ಥರು ಅಭಿಮಾನಿಗಳು ಕನ್ನಡ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

‘ನವೆಂಬರ್‌ ಅಂತ್ಯದವರೆಗೆ ಭೈರವನ ದುರ್ಗದ ಮೇಲೆ 65 ಅಡಿ ಎತ್ತರದ ಕನ್ನಡ ಬಾವುಟ ಹಾರಾಡಲಿದೆ. ಬಾವುಟದ ಹಾರಾಟವು ಮರೂರು, ಸೋಲೂರು, ತಿಪ್ಪಸಂದ್ರ, ಸುಗ್ಗನಹಳ್ಳಿ, ಶಿವಗಂಗೆವರೆಗೂ ಗೋಚರವಾಗುತ್ತಿದೆ. ಈ ದೃಶ್ಯ ನೋಡಲು ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಪ್ರತಿವರ್ಷ ಚಾರಣಿಗರು, ಕನ್ನಡದ ಅಭಿಮಾನಿಗಳು ಆಗಮಿಸಲಿ
ದ್ದಾರೆ’ ಎಂದು ಬಳಗದ ಅಧ್ಯಕ್ಷ ಕೆ.ಎಚ್. ನಾಗೇಶ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಎಚ್. ಸುರೇಶ್, ಕರ್ನಾಟಕ ರಕ್ಷಣಾ ಪಡೆಯ ರಾಜ್ಯ ಘಟಕದ ಅಧ್ಯಕ್ಷ ಶ್ರೀಧರ್, ಭೈರವನ ದುರ್ಗ ಸಂರಕ್ಷಣಾ ಸಮಿತಿ ಮುಖಂಡ ಕೆ.ಆರ್. ಯತಿರಾಜು, ಹನುಮಂತಪ್ಪ, ಡಾ.ರಾಜ್ ಕುಮಾರ್ ಅಭಿಮಾನಿ ಬಳಗದ ಸದಸ್ಯರಾದ ಸಿದ್ದರಾಜು, ಸುರೇಶ್, ಜಗದೀಶ್, ಕೆಂಪಾಚಾರಿ, ಲೇಖಕ ಆರ್‌. ಮಹೇಶ್‌, ಗೌಡರಪಾಳ್ಯದ ಗಂಗಾಧರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.