ADVERTISEMENT

ಬಿ.ವಿ.ಪಾಳ್ಯದಲ್ಲಿ ಸಂಭ್ರಮದ ಕರಗ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 13:53 IST
Last Updated 27 ಏಪ್ರಿಲ್ 2019, 13:53 IST
ಚನ್ನಪಟ್ಟಣ ತಾಲ್ಲೂಕಿನ ಬಿ.ವಿ.ಪಾಳ್ಯದಲ್ಲಿ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿ ಕರಗ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು
ಚನ್ನಪಟ್ಟಣ ತಾಲ್ಲೂಕಿನ ಬಿ.ವಿ.ಪಾಳ್ಯದಲ್ಲಿ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿ ಕರಗ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು   

ಚನ್ನಪಟ್ಟಣ: ತಾಲ್ಲೂಕಿನ ಬಿ.ವಿ. ಪಾಳ್ಯ ಗ್ರಾಮದ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿ ಕರಗ ಮಹೋತ್ಸವವು ಶನಿವಾರ ವಿಜೃಂಭಣೆಯಿಂದ ನಡೆಯಿತು.

ಮಹೋತ್ಸವದ ಅಂಗವಾಗಿ ಬುಧವಾರದಿಂದಲೆ ದೇವತಾ ಕಾರ್ಯಗಳು ಪ್ರಾರಂಭವಾಗಿದ್ದವು. ಕರಗ ಉತ್ಸವ ಶುಕ್ರವಾರ ರಾತ್ರಿ ಅಪಾರ ಜನಸ್ತೋಮದೊಂದಿಗೆ ನಡೆಯಿತು. ಬಿ.ವಿ. ಹಳ್ಳಿಯ ಕೆರೆ ಅಂಗಳದಲ್ಲಿರುವ ಕರಗದ ಗುಡಿಯಿಂದ ಮಧ್ಯರಾತ್ರಿ ಕರಗವು ಪ್ರಾರಂಭವಾಯಿತು.

ವೀರ ಕುಮಾರರ ಗೋಪಾಲ ಎಂಬ ಘೋಷಣೆ ಹಾಗೂ ಹಲಗೂ ಸೇವೆಗಳ ನಡುವೆ ಕರಗ ಹೊತ್ತ ಪೂಜಾರಿ ಪೆರುಮಾಳೇಗೌಡ ಬಿ.ವಿ. ಹಳ್ಳಿ ವೃತ್ತದಲ್ಲಿ ಪೂಜೆ ಪಡೆದು ಕರಗದ ವಾದ್ಯಕ್ಕೆ ಮತ್ತು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಬಿ.ವಿ. ಪಾಳ್ಯದ ಪ್ರತಿ ಬೀದಿಗಳಲ್ಲಿ ಸಾಗಿ ಎಲ್ಲ ಮನೆಗಳ ಬಳಿ ಪೂಜೆ ಸ್ವೀಕರಿಸಿದರು. ನಂತರ ದೇವಾಲಯದ ಬಳಿ ಹಾಕಿದ್ದ ಅಗ್ನಿಕುಂಡದಲ್ಲಿ ಹೆಜ್ಜೆ ಹಾಕುತ್ತಾ ಕರಗವು ದೇವಾಲಯವನ್ನು ತಲುಪಿತು.

ADVERTISEMENT

ಕರಗ ಮಹೋತ್ಸವದ ಪ್ರಯುಕ್ತ ಬಿ.ವಿ. ಪಾಳ್ಯ ಹಾಗೂ ಬಿ.ವಿ. ಹಳ್ಳಿಗಳಲ್ಲಿ ಗ್ರಾಮದ ಯುವಕರು ವಿದ್ಯುತ್ ದೀಪಾಲಂಕಾರ ಮಾಡಿದ್ದರು. ಜೊತೆಗೆ ಮುತ್ತಿನ ಪಲ್ಲಕ್ಕಿ, ಕೀಲು ಕುದುರೆ, ಮಹಿಳಾ ತಂಡದಿಂದ ಡೊಳ್ಳು ಕುಣಿತ, ಮೈಸೂರು ನಗಾರಿ, ಮರಗಲು ಕುಣಿತ ನಡೆದವು. ಹಾಗೆಯೆ ಬಿ.ವಿ. ಪಾಳ್ಯ ಬಿಸಿಲಮ್ಮ ಸೇರಿದಂತೆ ಸುತ್ತಲಿನ ಗ್ರಾಮ ದೇವತೆಗಳ ಪೂಜಾಕುಣಿತ ನಡೆದವು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಬಾಬು ಹಾಗೂ ಸರೋಜಮ್ಮ ಕುಟುಂಬದ ವತಿಯಿಂದ ಮಹೋತ್ಸವಕ್ಕೆ ಬಂದ ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ನಡೆಯಿತು. ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪೂಜಾರಿ ಕೃಷ್ಣಪ್ಪ, ಗೋಪಿನಾಥ್, ಮುಖಂಡರಾದ ತಮ್ಮಣ್ಣ, ಧನಂಜಯ, ರಾಜು, ಆರ್.ಶ್ರೀನಿವಾಸ್, ಬೆಳ್ಳೆ ದಾಸೇಗೌಡ, ಬಿ.ವಿ.ಹಳ್ಳಿ ಮಹೇಶ್, ರಾಮಣ್ಣ, ರಾಮೇಗೌಡ, ಯತೀರಾಜು, ಕುಮಾರ್, ರವಿಕುಮಾರ್, ಮಲ್ಲಿಗೆ, ಬಸವರಾಜು, ದಾಸಪ್ಪ, ದೇವರಾಜು, ಯೋಗೀಶ್, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.