ADVERTISEMENT

ಮಾಗಡಿ: ಕೆಂಪೇಗೌಡರ 511ನೇ ಜಯಂತಿ, ಜನಪರ ಆಡಳಿತ ರೂವಾರಿಗಳ ಸ್ಮರಣೆ

* ನಾಡಪ್ರಭು ಹೆಸರಿನಿಂದ ಬೆಂಗಳೂರು ಸುತ್ತಮುತ್ತ ಹೆಸರಾದವರು

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 17:29 IST
Last Updated 26 ಜೂನ್ 2020, 17:29 IST
ಕೆಂಪಸಾಗರದ ಈಶ್ವರ ಗುಡಿಯಲ್ಲಿ  ಹಿರಿಯ ಕೆಂಪೇಗೌಡರ ಉಬ್ಬುಚಿತ್ರ
ಕೆಂಪಸಾಗರದ ಈಶ್ವರ ಗುಡಿಯಲ್ಲಿ  ಹಿರಿಯ ಕೆಂಪೇಗೌಡರ ಉಬ್ಬುಚಿತ್ರ   

ಮಾಗಡಿ: ಕೆಂಪೇಗೌಡ ಅಭಿವೃದ್ಧಿ ಸಮಿತಿ ವತಿಯಿಂದ ಜೂನ್ 27ರಂದು ಬೆಳಿಗ್ಗೆ 8ಕ್ಕೆ ಕೆಂಪೇಗೌಡರ 511ನೇ ಜಯಂತಿ ಪುರಸಭೆ ಮುಂದಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸರಳವಾಗಿ ಆಚರಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ತಿಳಿಸಿದರು.

ಕೆಂಪೇಗೌಡ ವಂಶಜರ ಚಾರಿತ್ರಿಕ ಹಿನ್ನೆಲೆ: ವಿಜಯನಗರ ಸಾಮ್ರಾಜ್ಯದ ದಕ್ಷಿಣದ ಗಡಿರಕ್ಷಣೆಗೆ ದುಡಿದು ಮಡಿದ ಕೆಂಪೇಗೌಡರ ವಂಶಜರ ಆದರ್ಶ ನಾಡಿನ ಜನರೆಲ್ಲರಿಗೂ ಮಾರ್ಗದರ್ಶಿ ಎಂದು ಇತಿಹಾಸ ಸಂಶೋಧಕ ಪ್ರೊ.ತಿಮ್ಮಹನುಮಯ್ಯ ಅಭಿಪ್ರಾಯಪಟ್ಟರು.

ತಮಿಳುನಾಡಿನ ಯಣಮಂಜಿ ಪುತ್ತೋರಿನಿಂದ ಆವತಿ, ದೇವನಹಳ್ಳಿ, ಯಲಹಂಕಗಳಲ್ಲಿ ಕೆಂಪೇಗೌಡರ ಪೂರ್ಜಜರು ಪಾಳೆಪಟ್ಟು ಕಟ್ಟಿ ಆಳ್ವಿಕೆ ನಡೆಸಿದ್ದಾರೆ. ಹಿರಿಯ ಕೆಂಪೇಗೌಡ ಮತ್ತು ಅವರ ಮಕ್ಕಳು ಬೆಂಗಳೂರು, ಸಾವನದುರ್ಗ, ಮಾಗಡಿ, ಭೈರವನದುರ್ಗ, ಹುತ್ರಿದುರ್ಗ, ಕುಣಿಗಲ್ ಗಳನ್ನು ತಮ್ಮ ಆಡಳಿತದ ನೆಲೆಗಳನ್ನಾಗಿಸಿಕೊಂಡು ಜನೋಪಯೋಗಿ ಕೆಲಸಗಳನ್ನು ಮಾಡಿ ಯಥಾರಾಜ ತಥಾ ಪ್ರಜೆ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.

ADVERTISEMENT

ಹಿರಿಯ ಕೆಂಪೇಗೌಡ: (1510-1570) ಬೆಂಗಳೂರು ನಿರ್ಮಾತೃ. ವಿಜಯನಗರ ಅರಸರ ಆಶಯದಂತೆ ಬೆಂಗಳೂರಿನಲ್ಲಿ ಗುಡಿಗೋಪುರ, ಕೆರೆಕಟ್ಟೆ, ಸರ್ವಸಮುದಾಯದರಿಗೆ ಮಾರುಕಟ್ಟೆ ನಿರ್ಮಿಸಿದರು. ವಿಜಯನಗರದ ಅರಸರ ಸಾಮಂತ ಪ್ರಭುಗಳಾಗಿ ಜನಪರ ಆಡಳಿತ ನಡಸಿದರು.

ಇಮ್ಮಡಿ ಕೆಂಪೇಗೌಡ: (1585-1658) ಧೈರ್ಯ ಸಾಹಸಗಳಿಗೆ ಹೆಸರಾದವರು. ವಿಜಯನಗರದ ಅರವೀಡು ಸಂತತಿಯ ವೆಂಕಟಪತಿ ಮತ್ತು ಶ್ರೀರಂಗರಾಯ, ಅಳಿಯರಾಮರಾಯರ ಆಡಳಿತಕ್ಕೆ ಭುಜಬಲ ನೀಡಿದ್ದವರು. ಕ್ರಿ.ಶ.1628ರಲ್ಲಿ ರಣದುಲ್ಲಾಖಾನ್ ಬೆಂಗಳೂರಿಗೆ ದಾಳಿ ಮಾಡಿದ ನಂತರ ಸಾವನದುರ್ಗದಲ್ಲಿ ನೆಲೆಸಿದರು. ಮಾಗಡಿ ಆಳುತ್ತಿದ್ದ ಗುಡೇಮಾರನಹಳ್ಳಿ ತಳಾರಿ ಗಂಗಪ್ಪ ನಾಯಕನನ್ನು ಕೊಂದು ಮಾಗಡಿ ದುರ್ಗವನ್ನು ವಶಪಡಿಸಿಕೊಂಡರು. ಪಾಳೇಗಾರ ಕಟ್ಟಿಸಿದ್ದ ಮಣ್ಣಿನ ಕೋಟೆ ಹೊರಮೈಗೆ ಕಲ್ಲುಗಳನ್ನು ಕಟ್ಟಿಸಿದರು. ಪತ್ನಿ ಸವಿ ನೆನಪಿಗಾಗಿ ಭಾರ್ಗಾವತಿ ಕೆರೆ, ಸೋಮೇಶ್ವರಸ್ವಾಮಿ ದೇವಾಲಯ ಕಟ್ಟಿಸಿದರು.

ಮುಮ್ಮಡಿ ಕೆಂಪೇಗೌಡ:(1658-1678) ಕೆಂಪಮ್ಮ ಮತ್ತು ಇಮ್ಮಡಿ ಕೆಂಪೇಗೌಡರ ಪುತ್ರ. ಶಿವಭಕ್ತ, ಜನಪರ ಚಿಂತನೆಗೆ ಹೆಸರಾಗಿದ್ದರು. ಮಳೆಕೆಂಪರಾಯನೆಂಬ ಬಿರುದು ಗಳಿಸಿದ್ದರು. ತಾಯಿ ಕೆಂಪಮ್ಮ ಅವರ ಸವಿನೆನಪಿಗಾಗಿ ಕೆಂಪಸಾಗರದ ಕೆರೆ ಕಟ್ಟಿಸಿದರು.

ದೊಡ್ಡವೀರಪ್ಪಗೌಡ: (1678-1697) ಕೊರಟಗೆರೆ, ಮಧುಗಿರಿ, ಬಿಜ್ಜಾವರ, ಎಲಿಯೂರುಗಳನ್ನು ಆಳಿದರು.

ಕೆಂಪವೀರಪ್ಪಗೌಡ: (1697-1728) ದೊಡ್ಡವೀರಪ್ಪಗೌಡ-ಮುದ್ದುವೀರಾಂಬೆಯ ಪುತ್ರ. ಹುತ್ರಿದುರ್ಗಕ್ಕೆ ದೇವಗಿರಿ ಎಂದು ಕರೆದು ಬೆಟ್ಟಡ ಮೇಲೆ ಶಂಕರಲಿಂಗೇಶ್ವರ ದೇವಾಲಯ ಕಟ್ಟಿಸಿದರು. ಬ್ರಾಹ್ಮಣರಿಗೆ ಗ್ರಾಮಗಳನ್ನು ದತ್ತು ನೀಡಿ ಅಗ್ರಹಾರ ಎಂದು ಕರೆದರು. ದಳವಾಯಿ ದೇವರಾಜಯ್ಯ ಸೇನೆ ಸಾವನದುರ್ಗವನ್ನು ವಶಪಡಿಸಿಕೊಂಡಿತು. ಹುತ್ರಿದುರ್ಗದಲ್ಲಿ ಸ್ವತಂತ್ರ ಭೈರವ ನಾಣ್ಯಗಳನ್ನು ಟಂಕಿಸಿದ ನೆಪದ ಮೇಲೆ ವಿಜಯನಗರದ ಅರಸರಿಗೆ ಗೌಡರ ಮೇಲೆ ದೂರು ಸಲ್ಲಿಸಿ ಶ್ರೀರಂಗಪಟ್ಟಣದ ಜೈಲಿನಲ್ಲಿ ಕೈದಿ ಮಾಡಲಾಯಿತು.

ಕೆಂಪೇಗೌಡರ ವಂಶಜರು ಜನಪರ ಆಳ್ವಿಕೆ ಮಾಡಿ ಸರ್ವಸಮುದಾಯದವರ ಏಳಿಗೆಗೆ ದುಡಿದ ಮಹಾನುಭಾವರು. ಶಿವಗಂಗೆ, ಮಾಗಡಿ, ಸಾವನದುರ್ಗ, ಕೆಂಪಸಾಗರ, ಹುತ್ರಿದುರ್ಗ, ಹುಲಿಯೂರು ದುರ್ಗ,ಭೈರವನದುರ್ಗ, ಹುಲಿಕಲ್, ಕೆಂಪಾಪುರಗಳಲ್ಲಿ ಕೆಂಪೇಗೌಡರ ವಂಶಜರ ಸ್ಮಾರಕಗಳು ರಕ್ಷಣೆಯಿಲ್ಲದೆ ವಿನಾಶದತ್ತ ಸಾಗಿವೆ ಎನ್ನುತ್ತಾರೆ ಇತಿಹಾಸ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.