ಮಾಗಡಿ: ಪರಿಸರ ಸಂರಕ್ಷಣೆಯ ಹೊಣೆಗಾರಿಕೆ ಸರ್ವರ ಮೇಲೂ ಇದೆ.ಪರಿಸರ ನಾಶದಿಂದ ಜೀವನದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ವಿನ್ನರ್ಸ್ ಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ಪಾಷಿತ್ ತಿಳಿಸಿದರು.
ಪಟ್ಟಣದ ವಿನ್ನರ್ಸ್ ಶಾಲೆ ಮತ್ತು ಆಲ್-ಫಲಾ ಪಿಯು ಕಾಲೇಜಿನಲ್ಲಿ ಬುಧವಾರ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಸಸಿ ವಿತರಿಸಿ ಅವರು ಮಾತನಾಡಿದರು.
ಪ್ರಾಂಶುಪಾಲ ಶಹಬಾಜ್ ಅಹಮದ್ ಮಾತನಾಡಿ ‘ಪರಿಸರ ಉಳಿಸಿದರೆ ಮಾತ್ರ ಎಲ್ಲ ಜೀವಿಗಳು ಬದುಕಲು ಸಾಧ್ಯ. ಪರಿಸರದಿಂದಾಗುವ ಅನುಕೂಲಗಳ ಬಗ್ಗೆ ಮಕ್ಕಳಿಗೆಶಾಲಾ ಹಂತದಲ್ಲೇ ತಿಳಿಸಬೇಕು’ ಎಂದರು.
ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಸಸಿ ನೆಟ್ಟು ನೀರೆರೆದರು. ‘ಅರಣ್ಯ ಉಳಿಸುವುದು ನಮ್ಮೆಲ್ಲರ ಹೊಣೆ’ ಎಂಬುದರ ಬಗ್ಗೆ ಪ್ರಬಂಧ ಏರ್ಪಡಿಸಲಾಗಿತ್ತು. ವಿದ್ಯಾರ್ಥಿನಿ ಸುಬೇರ ಬಾನು ಪ್ರಥಮ, ಸಹನ ದ್ವಿತೀಯ ಬಹುಮಾನ ಗಳಿಸಿದರು.
ಉಪನ್ಯಾಸಕರಾದ ಕೃಷ್ಣಮೂರ್ತಿ, ದಕ್ಷಿಣಾಮೂರ್ತಿ, ಕುಮಾರ್ ಗೌಡ, ಮೋಹನ್, ಚಂದ್ರಶೇಖರಯ್ಯ, ಪುಷ್ಪಲತಾ, ಇಲಿಯಾಜ್, ಫಿರ್ದೋಸ್, ಶೈಲಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.