ಕನಕಪುರ: ಇಲ್ಲಿನ ರಾಮನಗರ ರಸ್ತೆ ಮುತ್ತುರಾಯಸ್ವಾಮಿ ದೇವಾಸ್ಥಾನ ಕಮಿಟಿ ಕೆಲ ಸದಸ್ಯರು ದೇವಸ್ಥಾನದ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದು ಪ್ರಶ್ನಿಸಿದರೆ ಗೂಂಡಾಗಳಿಂದ ಹಲ್ಲೆ ಮಾಡಿಸುವುದಾಗಿ ಬೆದರಿಸುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇ ಕೆಂದು ಸ್ಥಳೀಯರಾದ ಕೆ.ಕೃಷ್ಣ ಎಂಬು ವರು ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮುತ್ತುರಾಯಸ್ವಾಮಿ ದೇವಾಲಯ ಪುರಾತನ ದೇವಾಲಯಗಳಲ್ಲಿ ಒಂದಾ ಗಿದೆ. ಪ್ರತಿದಿನ ನೂರಾರು ಭಕ್ತರು ದೇವಾಲಯಕ್ಕೆ ಬರುತ್ತಾರೆ. ದೇವರ ಕಾಣಿಕೆಯಾಗಿ ಸಾವಿರಾರು ರೂಪಾಯಿ ಬರುತ್ತಿದ್ದು ಅದನ್ನು ದೇವಸ್ಥಾನದ ಅಕೌಂಟ್ಗೆ ಹಾಕಿ ದೇವಾಲಯ ಅಭಿವೃದ್ಧಿಗೆ ಬಳಸಬೇಕಿದೆ. ಆದರೆ, ದೇವಸ್ಥಾನ ಸಮಿತಿ ಸದಸ್ಯರಾದ ಶ್ರೀನಿವಾಸ್, ಮಹೇಶ್, ಅನಿಲ್ ಅವರು ಬ್ಯಾಂಕ್ ಖಾತೆಗೆ ಜಮಾ ಮಾಡದೆ ವೈಯಕ್ತಿಕವಾಗಿ ಬಳಕೆ ಮಾಡಿಕೊಂಡು ದೇವಾಲಯದ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
’ದೇವಾಲಯ ಕಮಿಟಿ ಸದಸ್ಯರು 2007ರಲ್ಲಿ₹5ಲಕ್ಷ ಹಣ ಉಳಿತಾಯ ಮಾಡಿ ಅದನ್ನು ಬ್ಯಾಂಕನ್ನಲ್ಲಿ ಇಟ್ಟು ಶ್ರೀನಿವಾಶ್, ಮಹೇಶ್, ಅನಿಲ್ ಅವರಿಗೆ ಮುಂದುವರಿಸಿಕೊಂಡು ಹೋಗುವಂತೆ ಜವಾಬ್ದಾರಿ ವಹಿಸಲಾಯಿತು. ವರ್ಷಕ್ಕೆ ₹2ಲಕ್ಷದಷ್ಟು ಆದಾಯ ಬರುತ್ತಿದೆ. ಈ ಮೂರು ಸೇರಿಕೊಂಡು ಯಾವುದೇ ಲೆಕ್ಕ ಕೊಡುತ್ತಿಲ್ಲ. ಕೇಳಲು ಹೋದವರ ಮೇಲೆ ಗಲಾಟೆ ಮಾಡಿ ಹಲ್ಲೆಗೆ ಯತ್ನಿಸುತ್ತಾರೆ. ರೌಡಿಗಳ ಮೂಲಕ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿಸುತ್ತಾರೆ. ಆ ಕಾರಣದಿಂದಾಗಿಯೇ ಕಮಿಟಿ ನಾಲ್ಕೈದು ಸದಸ್ಯರು ಇವರ ಬೆದರಿಕೆಗೆ ಹೆದರಿ ಸಮಿತಿಯಿಂದ ಹಿಂದೆ ಸರಿದಿದ್ದಾರೆ. ನಾನು ಕೇಳಿದಾಗ ನನ್ನ ಮೇಲೂ ಗಲಾಟೆ ಮಾಡಿಸುವುದಾಗಿ ಬೆದರಿಕೆ ಹಾಕಿದರು. ಇದಕ್ಕೆ ಹೆದರದೆ ಲೆಕ್ಕ ಕೇಳಿದೆ. ಅದಕ್ಕೆ ಯಾವುದೇ ಉತ್ತರ ಕೊಡದೆ ಬೆದರಿಕೆ ಹಾಕುತ್ತಿದ್ದಾರೆ’ ಎಂದರು.
ದೂರು ಪಡೆದಿರುವ ಪೊಲೀಸರು ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿರುವ ಕೆ.ಕೃಷ್ಣ ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮರು ದೂರು ನೀಡುವುದಾಗಿ ತಿಳಿಸಿದರು.
ಕೃಷ್ಣ ಅವರು ನೀಡಿರುವ ದೂರಿನ ಸಂಬಂಧ ಪುರ ಠಾಣೆ ಎಸ್.ಐಗೆ ಕರೆ ಮಾಡಿದಾಗ ಯಾವುದೇ ಉತ್ತರ ಸಿಗಲಿಲ್ಲ. ಸಿಪಿಐ ಅವರನ್ನು ವಿಚಾರಿಸಿದಾಗ ’ನನ್ನ ವ್ಯಾಪ್ತಿಗೆ ಬರು ವುದಿಲ್ಲ. ನೀವು ಎಸ್.ಐ ಅವರನ್ನೇ ಕೇಳಬೇಕು‘ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.