ADVERTISEMENT

‘ಪ್ರಕೃತಿ ಮನುಷ್ಯನ ಆಸೆ ಪೂರೈಸುತ್ತದೆ; ದುರಾಸೆಯನ್ನಲ್ಲ’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 13:34 IST
Last Updated 23 ಏಪ್ರಿಲ್ 2019, 13:34 IST
ನ್ಯಾಯಾಲಯದ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ನೀರೆರೆಯಲಾಯಿತು
ನ್ಯಾಯಾಲಯದ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ನೀರೆರೆಯಲಾಯಿತು   

ಚನ್ನಪಟ್ಟಣ: ‘ಮನುಷ್ಯನ ಪ್ರಕೃತಿ ವಿರೋಧಿ ಕಾರ್ಯಗಳು ಪರಿಸರದ ನಾಶಕ್ಕೆ ಕಾರಣವಾಗಿದೆ’ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಬಿ.ಟಿ.ಅನ್ನಪೂರ್ಣೇಶ್ವರಿ ಅಭಿಪ್ರಾಯಪಟ್ಟರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸೋಮವಾರ ನಡೆದ ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅತಿಯಾದ ಅಭಿವೃದ್ಧಿ ಕಾರ್ಯಗಳ ಪರಿಣಾಮ ಭೂಮಿ ಅಪಾಯದ ಅಂಚಿನಲ್ಲಿದೆ. ಮಾನವನನ್ನು ಒಳಗೊಂಡಂತೆ, ಪ್ರಾಣಿ, ಪಕ್ಷಿ ಮತ್ತು ಇನ್ನಿತರ ಜೀವ ಸಂಕುಲಗಳನ್ನು ಕೋಟ್ಯಂತರ ವರ್ಷಗಳಿಂದ ಸಲಹುತ್ತಿರುವ ಭೂಮಿಯ ಅಗಾಧತೆ ಅನನ್ಯ. ಕೋಟ್ಯಂತರ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಈ ಭೂಮಿಗಿದೆ. ನಮ್ಮ ಬದುಕಿಗೆ ಅಗತ್ಯವಿರುವ ಗಾಳಿ, ನೀರು, ಆಹಾರಗಳೆಲ್ಲವನ್ನೂ ಪರಿಸರ ನೀಡಿದೆ’ ಎಂದು ಅವರು ಹೇಳಿದರು.

ADVERTISEMENT

‘ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿದು, ಪರಿಸರ ನಾಶಮಾಡಿ ನಿರಂತರವಾಗಿ ಭೂಮಿಯ ಮೇಲೆ ದೌರ್ಜನ್ಯ ನಡೆಸುತ್ತಿರುವುದರಿಂದ ಜಾಗತಿಕ ತಾಪಮಾನದಲ್ಲಿ ವ್ಯತ್ಯಯವಾಗಿ ಕಾಲ ಕಾಲಕ್ಕೆ ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ಗಿಡಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯವಾಗಬೇಕು’ ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಕೆ.ಎಸ್.ನಮ್ರತಾ ರಾವ್ ಮಾತನಾಡಿ ‘ನಮ್ಮದು ಭೂಮಿಯನ್ನು ತಾಯಿ ರೂಪದಲ್ಲಿ ಕಂಡು ಗೌರವಿಸುವ ಸಂಸ್ಕೃತಿ. ಹಸಿರು ಬೆಳೆಸುವ ಮೂಲಕ ಪರಿಸರವನ್ನು, ಭೂಮಿಯನ್ನು ಕಾಪಾಡಬೇಕು. ಮಳೆ ನೀರಿನ ಮರುಬಳಕೆ ಮಾಡುವ ಮೂಲಕ ಜಲಸಂರಕ್ಷಣೆ ಮಾಡಿ ಭೂಮಿಯ ಸಂರಕ್ಷಣೆಗೆ ಪಣತೊಡಬೇಕು’ ಎಂದರು.

‘ಭೂಮಿಯ ಮಹತ್ವ ಮತ್ತು ಅದರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಏ.22ರಂದು ‘ವಿಶ್ವಭೂಮಿ ದಿನ’ವನ್ನು ಆಚರಿಸಲಾಗುತ್ತದೆ. ಮುಂದಿನ ಪೀಳಿಗೆಗೂ ನಮ್ಮ ಭೂಮಿಯನ್ನು ಉಳಿಸಬೇಕು ಎಂಬುದೇ ಈ ದಿನದ ಮುಖ್ಯ ಉದ್ದೇಶವಾಗಿದೆ. 1970ರಲ್ಲಿ ಮೊದಲ ಬಾರಿಗೆ ಆರಂಭವಾದ ಈ ದಿನಾಚರಣೆ ಈಗ ವಿಶ್ವಸಂಸ್ಥೆಯ ಮಾನ್ಯತೆಯೊಂದಿಗೆ ಆಚರಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ನ್ಯಾಯಾಲಯದ ಆವರಣದಲ್ಲಿ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಟಿ.ತಿಮ್ಮೇಗೌಡ, ಉಪಾಧ್ಯಕ್ಷ ಎಂ.ಕೆ.ನಿಂಗಪ್ಪ, ಪ್ರಧಾನ ಕಾರ್ಯದರ್ಶಿ ಹ್ಯಾರಿಸ್ ಖಾನ್, ಸರ್ಕಾರಿ ಅಭಿಯೋಜಕ ಕೆ.ಜಿ.ಸುರೇಶ್, ವಕೀಲ ಶಿವಪ್ರಸಾದ್, ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.