ಚನ್ನಪಟ್ಟಣ: ‘ಯುವಜನರಿಗೆ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ನೀಡುವ ಅವಶ್ಯಕತೆ ಇದೆ’ ಎಂದು ಎಸ್ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ನಾಗವಾರ ಶಂಭೂಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಶಾರದಾಂಬೆ ಜಾನಪದ ಕಲಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕೆಂಪೇಗೌಡ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪಿಗಾಗಿ ಏರ್ಪಡಿಸಿದ್ದ ರಂಗ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ಯುವಜನರು ದೂರ ದೃಷ್ಟಿ ಚಿಂತನೆ ನಡೆಸುವುದನ್ನೇ ಬಿಟ್ಟಿದ್ದಾರೆ. ಐತಿಹಾಸಿಕ ವಿಚಾರಗಳು, ಹಿರಿಯ ವಿದ್ವಾಂಸರು, ಪೌರಾಣಿಕ ವಿಚಾರಗಳನ್ನು ಮರೆಯುತ್ತಿದ್ದಾರೆ. ಪೌರಾಣಿಕ ವಿಚಾರಗಳಲ್ಲಿ ಬರುವ ಸಾರ ತಿಳಿದು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸುವ ಅವಶ್ಯಕತೆ ಇದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಲಾವಿದ ರವೀಶ್ ಮಾತನಾಡಿ, ‘ಸರ್ಕಾರ ಸಂಘ ಸಂಸ್ಥೆಗಳಿಗೆ ನೀಡುತ್ತಿರುವ ಅನುದಾನದಲ್ಲಿ ತಾರತಮ್ಯ ಮಾಡದೆ ನಿಜವಾದ ಕಲಾವಿದರಿಗೆ ನೀಡುವ ಮೂಲಕ ಅವರನ್ನು ಬೆಳೆಸಬೇಕು. ಇತ್ತೀಚಿನ ದಿನಗಳಲ್ಲಿ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ. ನಿಜವಾದ ಕಲಾವಿದರನ್ನು ಗುರುತಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.
ಟ್ರಸ್ಟ್ ಕಾರ್ಯದರ್ಶಿ ಪುಟ್ಟರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಂಜನೇಯ ಕಲಾ ಟ್ರಸ್ಟ್ ಅಧ್ಯಕ್ಷ ಚಕ್ಕೆರೆ ವಿಜೇಂದ್ರ, ಬೊಂಬೆ ನಾಡು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕರ್ಣ, ಕಲಾವಿದ ತೊರೆಹೊಸೂರು ಚಂದ್ರಶೇಖರ್, ರಂಗ ನಿರ್ದೇಶಕ ಶಿವಾನಂದ ಮೂರ್ತಿ, ವೆಂಕಟೇಶ್, ಕೃಷ್ಣಪ್ಪ ಇದ್ದರು. ಗಾಯಕರಾದ ಅಬ್ಬೂರು ಕೃಷ್ಣಪ್ಪ, ದಯಾನಂದ, ಮಹೇಶ್, ಕಿರಣ್ ಕುಮಾರ್, ರಾಜು, ಶಿವಕುಮಾರ್ ತಂಡದವರು ರಂಗ ಗೀತೆಗಳನ್ನು ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.