
ಕನಕಪುರ: ಬೆಂಗಳೂರು ದಕ್ಷಿಣ ಲೋಕಾಯುಕ್ತ ಅಧಿಕಾರಿಗಳು ಎರಡನೇ ದಿನವಾದ ಶುಕ್ರವಾರವೂ ಸಾರ್ವಜನಿಕರಿಂದ ಕುಂದು ಕೊರತೆ ಅಹವಾಲು ಸ್ವೀಕರಿಸಿದರು.
ವರ್ಷ ಕಳೆದರೂ ಜಮೀನು ಖಾತೆ ಮಾಡಿಕೊಟ್ಟಿಲ್ಲ. ಜಮೀನಿನ ದುರಸ್ತಿ ಮಾಡಿಕೊಡುತ್ತಿಲ್ಲ. ಪೋಲಿಸರು ಸರಿಯಾದ ಕ್ರಮಕ್ಕೆ ಮುಂದಾಗುತ್ತಿಲ್ಲ. ದೂರು ಕೊಟ್ಟವರನ್ನೇ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಊರಿಗೆ ಸ್ಮಶಾನ ಇಲ್ಲ ಎಂಬುವುದು ಸೇರಿದಂತೆ ಹಲವು ದೂರುಗಳನ್ನು ಲೋಕಾಯುಕ್ತರಿಗೆ ಸಲ್ಲಿಸಿದರು.
ಸಾರ್ವಜನಿಕರ ಅಹವಾಲು ಆಲಿಸಿದ ಅಧಿಕಾರಿಗಳು ಸ್ಥಳದಲ್ಲೇ ಕೆಲವು ಸಮಸ್ಯೆಗಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಮೂಲಕ ಇತ್ಯರ್ಥಪಡಿಸಿದರು. ಉಳಿದಂತೆ ಕೆಲವು ಗಂಭೀರ ಸ್ವರೂಪದ ದೂರುಗಳನ್ನು ತಾವೇ ಬಗೆಹರಿಸುವುದಾಗಿ ಹೇಳಿದರು.
ವಯಸ್ಸಾದ ದಂಪತಿಗೆ ಮಾಸಿಕ ವೃದ್ಧಾಪ್ಯ ವೇತನ ಆದೇಶ ಪತ್ರ ಸೇರಿದಂತೆ ಸ್ಥಳದಲ್ಲೇ ಬಗೆಹರಿದ ಸಮಸ್ಯೆಗಳು ಒಂದೆಡೆಯಾದರೆ, ಅಧಿಕಾರಿಗಳಿಂದಲೇ ತಡವಾಗಿರುವ ಪ್ರಕರಣಗಳಿಗೆ ಯಾವ ಕಾರಣಕ್ಕೆ ತಡವಾಗಿದೆ ಎಂದು ಮಾಹಿತಿ ಪಡೆದು ಸೂಕ್ತ ಸಮಯದಲ್ಲಿ ಬಗೆ ಹರಿಸುವಂತೆ ತಾಕೀತು ಮಾಡಿದರು.
ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಚಿಕ್ಕ ಎರಂಗೆರೆ ಗ್ರಾಮದಲ್ಲಿ ನಡೆದ ಬಾಲ್ಯ ವಿವಾಹ ಮತ್ತು ವಧು ಗರ್ಭಿಣಿಯಾದ ವಿಷಯ ಅಧಿಕಾರಿಗಳ ಗಮನಕ್ಕೆ ಬಂದಿತು.
ಗರ್ಭಿಣಿ ಬಾಲಕಿ ಹೊಸದುರ್ಗ ಪ್ರಾಥಮಿಕ ಆರೊಗ್ಯ ಕೇಂದ್ರಕ್ಕೆ ತಪಾಸಣೆಗೆ ತೆರಳಿದ್ದಳು. ವಯಸ್ಸಿನ ಆಧಾರದ ಮೇಲೆ ವೈದ್ಯಾಧಿಕಾರಿಗಳು ಬಾಲ್ಯ ವಿವಾಹ ಎಂದು ನಿರ್ಧರಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಸಿಡಿಪಿಒ ದೂರು ನೀಡಲು ಮೀನಮೇಷ ಎಣಿಸಿ ಕಾಲ ಹರಣ ಮಾಡಿದ್ದಾರೆ ಎಂಬ ದೂರು ಕೇಳಿ ಬಂತು. ತಕ್ಷಣ ಲೋಕಾಯುಕ್ತರು ಕೋಡಿಹಳ್ಳಿ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿ, ದೂರು ದಾಖಲಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನೀಡಿದ ದೂರಿನ ಮೇರೆಗೆ ಕೋಡಿಹಳ್ಳಿ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.