ಕನಕಪುರ: ‘ಕೊರೊನಾ ಮೂರನೇ ಅಲೆಯು ದೇಶದ ಕೆಲವೆಡೆ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರು ಸೋಂಕಿನ ಬಗ್ಗೆ ನಿರ್ಲಕ್ಷ್ಯ ತಾಳದೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಹಾರೋಹಳ್ಳಿ ರೋಟರಿ ಕಾರ್ಯದರ್ಶಿ ರಾಂಪುರ ಪ್ರಕಾಶ್ ಮನವಿ ಮಾಡಿದರು.
ತಾಲ್ಲೂಕಿನ ಹಾರೋಹಳ್ಳಿ ರೋಟರಿ ಸಂಸ್ಥೆಯಿಂದ ಗೋದೂರು ಮತ್ತು ಪಡುವಣಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪಲ್ಸ್ ಆಕ್ಸಿಮೀಟರ್ ಹಾಗೂ ಎನ್-95 ಮಾಸ್ಕ್ ವಿತರಿಸಿ ಅವರು ಮಾತನಾಡಿದರು.
ವಿಶ್ವದಲ್ಲಿ ಕೊರೊನಾ ಸೋಂಕಿನ ಭೀಕರ ಪರಿಣಾಮವನ್ನು ಎರಡನೇ ಅಲೆಯಲ್ಲಿ ಕಂಡಿದ್ದೇವೆ. ನಮ್ಮ ಕುಟುಂಬಸ್ಥರು, ಸಂಬಂಧಿಕರನ್ನು ಕಳೆದುಕೊಂಡಿದ್ದೇವೆ ಎಂದರು.
ಇದೆಲ್ಲವೂ ನಮ್ಮ ನಿರ್ಲಕ್ಷ್ಯದಿಂದಲೇ ಆಗಿದ್ದು, ಮೂರನೇ ಅಲೆಯಲ್ಲಿ ಅದಕ್ಕೆ ಅವಕಾಶ ಕೊಡಬಾರದು. ನಮ್ಮ ಎಚ್ಚರಿಕೆಯನ್ನು ನಾವೇ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಪಡುವಣಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಹನುಮಂತಯ್ಯ ಮಾತನಾಡಿ, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳುವ ಕಾರ್ಯಕ್ರಮಗಳನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.
ಯಾರು ವ್ಯಾಕ್ಸಿನ್ ತೆಗೆದುಕೊಂಡಿಲ್ಲವೋ ಅವರು ವ್ಯಾಕ್ಸಿನ್ ಪಡೆದುಕೊಳ್ಳಬೇಕು. ಸೋಂಕಿನ ಲಕ್ಷಣ ಕಾಣುತ್ತಿದ್ದಂತೆ ವೈದ್ಯರ ಬಳಿಗೆ ಬಂದು ಪರೀಕ್ಷೆ ಮಾಡಿಸಿ ಅಗತ್ಯ ಔಷಧೋಪಚಾರ ತೆಗೆದುಕೊಳ್ಳಬೇಕು ಎಂದು ಸಲಹೆ
ನೀಡಿದರು.
ಗೋದೂರು ಪಿಎಚ್ಸಿಯ ವೈದ್ಯಾಧಿಕಾರಿ ಡಾ.ವರಲಕ್ಷ್ಮಿ, ರೋಟರಿ ಮಾಜಿ ಅಧ್ಯಕ್ಷರಾದ ಮಹಮ್ಮದ್ ಏಜಾಸ್, ಡಾ.ಪ್ರಾಣೇಶ್, ಏಡುಮಡು ಕಾಂತರಾಜು, ಭರತ್, ದೀಪಕ್, ಖಜಾಂಚಿ ಜಗದೀಶ್, ಸದಸ್ಯರಾದ ಹೊನ್ನೇಗೌಡ, ಪ್ರದೀಪ್
ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.