ಬಿಡದಿ: ಸರ್ಕಾರದಿಂದ ಗ್ರಾಮಸ್ಥರಿಗೆ ಮಂಜೂರಾಗಿರುವ ಜಮೀನುಗಳನ್ನು ಅರಣ್ಯಾಧಿಕಾರಿಗಳು ತಮ್ಮ ಇಲಾಖೆಗೆ ಸೇರಿದ ಭೂಮಿ ಎಂದು ಹೇಳಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಭೈರಾಗಿ ಕಾಲೊನಿ ಹಾಗೂ ವಾಜರಹಳ್ಳಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಭೈರಾಗಿ ಕಾಲೊನಿಯಲ್ಲಿ ಸರ್ವೆ ನಂಬರ್ 28, 30, 31 ಹಾಗೂ 34 ಭೂಮಿಯನ್ನು ಸರ್ಕಾರ 50 ವರ್ಷ ಹಿಂದೆಯೇ ಭೂಮಿ ಮಂಜೂರು ಮಾಡಿದೆ. ಸುಮಾರು 80 ವರ್ಷಗಳಿಂದ ಕಾಲುನಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಇದನ್ನು ಅರಿಯದ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಬಂದು ಜಾಗಖಾಲಿ ಮಾಡಿ ಎನ್ನುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
‘ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮುದಾಯದ ಮಂದಿ ಕಾಲೊನಿಯಲ್ಲಿ ಹೆಚ್ಚು ವಾಸಿಸುತ್ತಿದ್ದೇವೆ. ಸಣ್ಣ, ಅತಿ ಸಣ್ಣ ರೈತರಾಗಿ ಭೂ ಹಿಡುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮಗೆ ಈ ತುಂಡು ಭೂಮಿಯೇ ಜೀವನಕ್ಕೆ ಆಧಾರವಾಗಿದೆ. ನಮ್ಮನ್ನು ಒಕ್ಕಲೆಬ್ಬಿಸಲು ಯತ್ನಿಸಿದ್ದಲ್ಲಿ ಸುಮಾರು 450 ಕುಟುಂಬಗಳು ಬೀದಿಗೆ ಬೀಳುತ್ತವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು’ ಎಂದು ನಿವಾಸಿಗಳು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.