ಬಿಡದಿ: ಮಾಗಡಿ ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ 500ಕ್ಕೂ ಹೆಚ್ಚು ರೈತರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಿಡದಿ ಬಳಿಯ ಕೇತಗಾನಹಳ್ಳಿ ತೋಟದ ಮನೆ ಮುಂಭಾಗ ಪ್ರತಿಭಟನೆ ನಡೆಸಿದರು.
ಯಾವುದೇ ರೀತಿಯ ಕೈಗಾರಿಕೆ ಸ್ಥಾಪಿಸಿ ನಮಗೆ ಉದ್ಯೋಗ ನೀಡುವುದು ಬೇಡ. ಮಾಗಡಿಯು ಹಸಿರು ಪ್ರದೇಶವೆಂದು ಈಗಾಗಲೇ ಸರ್ಕಾರ ಘೋಷಿಸಿದೆ. ಕುಮಾರಸ್ವಾಮಿ ಮತ್ತು ಎಚ್.ಡಿ. ದೇವೇಗೌಡ ಅವರು ರೈತರ ಸಂಕಷ್ಟವನ್ನು ಆಲಿಸಿದ್ದಾರೆ ಎಂಬ ನಂಬಿಕೆ ಮೇಲೆ ಅವರಿಗೆ ಮನವಿ ಪತ್ರ ಸಲ್ಲಿಸಲು ಇಲ್ಲಿಗೆ ಬಂದಿದ್ದೇವೆ ಎಂದು ರೈತರು ತಿಳಿಸಿದರು.
ಬಿಜೆಪಿ ರಾಜ್ಯ ಸರ್ಕಾರ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ನಮ್ಮ ಭಾಗದಲ್ಲಿ ಯಾವುದೇ ಬಿಜೆಪಿ ಮುಖಂಡರಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸಮಸ್ಯೆ ಆಲಿಸುತ್ತಿಲ್ಲ ಎಂದು ದೂರಿದರು.
ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ. ನಮ್ಮ ಭಾಗದಲ್ಲಿ ಅಡಿಕೆ, ಬಾಳೆಯಿಂದ ಬದುಕು ಕಟ್ಟಿಕೊಂಡಿದ್ದೇವೆ. ಸರ್ಕಾರ ನೀಡುವ ₹ 70– ₹80 ಲಕ್ಷ ಪರಿಹಾರದಿಂದ ಮನೆಗಳು ಒಡೆದು ಹೋಗುತ್ತವೆ ಹೊರತು ಯಾವುದೇ ಅಭಿವೃದ್ಧಿ ಕಾಣುವುದಿಲ್ಲ ಎಂದು ಅಳಲು ತೋಡಿಕೊಂಡರು.
ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ರೈತರೊಂದಿಗೆ ಚರ್ಚಿಸಿದರು. ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದೆ. ಹಾಗಾಗಿ, ನಿಮ್ಮನ್ನು ಖುದ್ದಾಗಿ ಭೇಟಿ ಮಾಡಲು ಆಗುತ್ತಿಲ್ಲ. ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಸ್ಥರನ್ನು ಸೋಮವಾರ ಕರೆಯಿಸಿ ಸ್ಥಳೀಯ ಶಾಸಕರ ಮೂಲಕ ಸಮಸ್ಯೆ ಬರೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತರು ಧರಣಿ ಕೈಬಿಟ್ಟರು.
ಎಂ.ಎಸ್. ಜಯರಾಮಯ್ಯ, ಬಾಬು ಗೌಡ, ಸಾಗರ್, ಮುನಿರಾಜು, ಗೋವಿಂದಪ್ಪ, ಭೈರಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.