ADVERTISEMENT

ರಾಮನಗರ ಜಿಪಂ ಅಧ್ಯಕ್ಷರಾಗಿ ಅಶೋಕ್‌ ಆಯ್ಕೆ ಸಾಧ್ಯತೆ

ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 15:47 IST
Last Updated 9 ಸೆಪ್ಟೆಂಬರ್ 2020, 15:47 IST
ಎಚ್‌.ಎನ್‌. ಅಶೋಕ್‌
ಎಚ್‌.ಎನ್‌. ಅಶೋಕ್‌   

ರಾಮನಗರ: ಇಲ್ಲಿನ ಜಿಲ್ಲಾ ಪಂಚಾಯಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನಡೆಯಲಿದೆ. ಕೂಟಗಲ್‌ ಕ್ಷೇತ್ರದ ಸದಸ್ಯ,ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಸಹೋದರ ಎಚ್‌.ಎನ್‌. ಅಶೋಕ್‌ ಆಯ್ಕೆಯಾಗುವ ಸಾಧ್ಯತೆ ಇದೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಬಸಪ್ಪ ವೈಯಕ್ತಿಕ ಕಾರಣ ನೀಡಿ ಬಸಪ್ಪ ಇದೇ ತಿಂಗಳ ಆಗಸ್ಟ್‌ 10ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದನ್ನು ಹಿಂಪಡೆಯಲು ನಿಯಮಾವಳಿ ಪ್ರಕಾರ 14 ದಿನ ಕಾಲಾವಕಾಶ ಇತ್ತು. ಆದರೆ ರಾಜೀನಾಮೆ ವಾಪಸ್‌ ಆಗದ ಕಾರಣ ಸರ್ಕಾರ ಅದನ್ನು ಆ.೨೫ರಂದು ಅಂಗೀಕರಿಸಿತ್ತು. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಈ ಚುನಾವಣೆ ನಡೆಯುತ್ತಿದೆ.

ಜಿಲ್ಲಾ ಪಂಚಾಯತಿಯ ಕಡೆಯ ಎರಡು ವರ್ಷದ ಅವಧಿಗೆ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಅಧಿಕಾರ ಹಂಚಿಕೆ ಸೂತ್ರ ಏರ್ಪಟ್ಟಿದ್ದು, ಬಸಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರ ಅವಧಿ ಮುಗಿಯುತ್ತಾ ಬಂದಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ನಾಯಕರು ಸೂಚಿಸಿದ್ದು, ಅದರಂತೆ ಬಸಪ್ಪ ಅಧ್ಯಕ್ಷ ಹುದ್ದೆಗೆ ರಾಜೀನಾಮೆಯನ್ನೂ ನೀಡಿದ್ದರು. 2016ರಲ್ಲಿ ಜಿಲ್ಲಾ ಪಂಚಾಯಿತಿಗೆ ನೂತನ ಸದಸ್ಯರ ಆಯ್ಕೆ ಆಗಿತ್ತು. ಅವರ ಅಧಿಕಾರ ಅವಧಿ ಮುಕ್ತಾಯಕ್ಕೆ ಇನ್ನೂ 8-10 ತಿಂಗಳಷ್ಟೇ ಬಾಕಿ ಉಳಿದಿದೆ. ಹೀಗಾಗಿ ಕಡೆಯ ಅವಧಿಗೆ ಅಧ್ಯಕ್ಷರ ಆಯ್ಕೆ ನಡೆಯುತ್ತಿದೆ. ಹಿಂದೆ ಕಾಂಗ್ರೆಸ್ ಮುಖಂಡರ ನಡುವೆ ಮಾತುಕತೆ ಆದಂತೆ ಅಶೋಕ್‌ಗೆ ಅವಕಾಶ ಸಿಗುವ ಸಾಧ್ಯತೆಯೇ ಹೆಚ್ಚಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ತಿಳಿಸಿದರು.

ADVERTISEMENT

ಆಯ್ಕೆ ಪ್ರಕ್ರಿಯೆ: ಮಧ್ಯಾಹ್ನ 12 ಗಂಟೆಗೆ ರಾಮನಗರ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಚುನಾವಣೆ ಸಭೆ ನಡೆಯಲಿದೆ. ಅಧ್ಯಕ್ಷ ಸ್ಥಾನವು ʼಸಾಮಾನ್ಯʼ ವರ್ಗಕ್ಕೆ ಮೀಸಲಾಗಿದ್ದು, ಸ್ಪರ್ಧಿಸುವ ಸದಸ್ಯರು ಬೆಳಿಗ್ಗೆ 9 ರಿಂದ 10 ಗಂಟೆಯ ಒಳಗಾಗಿ ಹೆಚ್ಚುವರಿ ಜಿಲ್ಲಧಿಕಾರಿ ವಿಜಯ್‌ ಅವರಲ್ಲಿ ನಾಮಪತ್ರ ಸಲ್ಲಿಸಬಹುದು. ಸಭೆಯು ಆರಂಭಗೊಂಡ ಬಳಿಕ ಸಲ್ಲಿಕೆಯಾಗಿರುವ ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಪರಿಶೀಲನೆಯ ಬಳಿಕ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಬಹುದಾಗಿದೆ. ಸೂಚನೆಯ ಪರವಾಗಿ ಮತ್ತು ವಿರುದ್ಧವಾಗಿ ನೀಡುವ ಮತಗಳನ್ನು ʼಕೈʼ ಎತ್ತುವ ಮೂಲಕ ದಾಖಲು ಮಾಡಿಕೊಳ್ಳಲಾಗುವುದು ಎಂದು ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 22 ಸದಸ್ಯರಿದ್ದು, ಈ ಪೈಕಿ 16 ಮಂದಿ ಕಾಂಗ್ರೆಸ್‌ನಿಂದ ಹಾಗೂ 6 ಮಂದಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಹೊಂದಿದ್ದು, ಆ ಪಕ್ಷದವರೇ ಅಧ್ಯಕ್ಷರಾಗಿ ಆಯ್ಕೆ ಆಗುತ್ತ ಬಂದಿದ್ದಾರೆ. ಆದರೆ ಮಧ್ಯದಲ್ಲಿ ಕೆಲವು ಸದಸ್ಯರು ತಮ್ಮ ಪಕ್ಷನಿಷ್ಠೆ ಬದಲಿಸಿದ್ದಾರೆ. ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಅನುಮಾನ. ಅವಿರೋಧ ಆಯ್ಕೆಯ ಸಾಧ್ಯತೆ ಹೆಚ್ಚಿದೆ.

ಅಶೋಕ್‌ ಅವರಿಗೆ ಅವಕಾಶ ನೀಡುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅದರಂತೆ ಗುರುವಾರ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದುಕಾಂಗ್ರೆಸ್ ಮುಖಂಡಎಚ್‌.ಸಿ. ಬಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.