ADVERTISEMENT

‘ಕನ್ನಡದ ಅಸ್ಮಿತೆ ಉಳಿಸಿ’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 8:02 IST
Last Updated 8 ನವೆಂಬರ್ 2021, 8:02 IST
ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್‌ ಸಿಟಿಯ ಐಎಸ್‌ಬಿಆರ್ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಕಾರ್ಯಕ್ರಮವನ್ನು ಸಾಹಿತಿ ಶೂದ್ರ ಶ್ರೀನಿವಾಸ್ ಉದ್ಘಾಟಿಸಿದರು
ಆನೇಕಲ್ ತಾಲ್ಲೂಕಿನ ಎಲೆಕ್ಟ್ರಾನಿಕ್‌ ಸಿಟಿಯ ಐಎಸ್‌ಬಿಆರ್ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಕಾರ್ಯಕ್ರಮವನ್ನು ಸಾಹಿತಿ ಶೂದ್ರ ಶ್ರೀನಿವಾಸ್ ಉದ್ಘಾಟಿಸಿದರು   

ಆನೇಕಲ್:ಗಡಿ ಭಾಗಗಳಲ್ಲಿ ಜನರು ಸಂಸ್ಕೃತಿ ಮತ್ತು ಭಾಷೆಯ ಜೊತೆಗೆ ಹೋರಾಟ ಮಾಡಿ ತಮ್ಮ ಅಸ್ಮಿತೆ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಹಾಗಾಗಿ, ಕನ್ನಡ ಭಾಷೆಯ ಅಸ್ಮಿತೆ ಉಳಿಸಲು ಕನ್ನಡ ವಾತಾವರಣವನ್ನು ನಿರ್ಮಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಾಹಿತಿ ಶೂದ್ರ ಶ್ರೀನಿವಾಸ್‌ ತಿಳಿಸಿದರು.

ತಾಲ್ಲೂಕಿನ ಎಲೆಕ್ಟ್ರಾನಿಕ್‌ ಸಿಟಿಯ ಐಎಸ್‌ಬಿಆರ್ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾಷಾವಾರು ಪ್ರಾಂತ್ಯಗಳು ರಚನೆಯ ಸಂದರ್ಭದಲ್ಲಿ ಅಚ್ಚ ಕನ್ನಡದ ಪ್ರದೇಶಗಳು ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳಿಗೆ ಸೇರ್ಪಡೆಯಾದವು. ಬೇರೆ ರಾಜ್ಯಗಳ ಆಡಳಿತವಿದ್ದರೂ ಈ ಭಾಗಗಳಲ್ಲಿ ಕನ್ನಡ ವಾತಾವರಣ, ಸಂಸ್ಕೃತಿ ಉಳಿದಿತ್ತು ಎಂದರು.

ADVERTISEMENT

ಹೊಸೂರು, ಡೆಂಕಣಿಕೋಟೆ, ಬಾಗಲೂರು, ಸೂಳಗಿರಿ, ಗುಮ್ಮಳಾಪುರ, ಮದಗೊಂಡನ
ಹಳ್ಳಿ ತಮಿಳುನಾಡಿನಲ್ಲಿದ್ದರೂ ಕನ್ನಡ ಶಾಲೆಗಳಿದ್ದವು. ಕನ್ನಡ ಭಾಷೆಯೇ ಮಾತೃಭಾಷೆಯಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ತಮಿಳು ಪ್ರಭಾವ ಹೆಚ್ಚಾಗಿದ್ದು ಕನ್ನಡ ಭಾಷೆ, ಸಂಸ್ಕೃತಿಗೆ ತೊಡಕಾಗಿದೆ. ಇದೇ ಪರಿಸ್ಥಿತಿ ಕೇರಳದ ಕಾಸರಗೋಡಿನಲ್ಲೂ ನಿರ್ಮಾಣವಾಗಿದೆ. ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಐಎಸ್‌ಬಿಆರ್‌ ಪದವಿ ಕಾಲೇಜಿನ ಪ್ರಾಚಾರ್ಯ ತಪನ್‌ನಾಯಕ್‌ ಮಾತನಾಡಿ, ಕನ್ನಡ ಭಾಷೆ ಶ್ರೀಮಂತವಾಗಿದೆ. ಈ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ನಿವೃತ್ತ ಯೋಧ ಸಿ. ವೇಣು, ಐಎಸ್‌ಬಿಆರ್‌ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಬಲವಂತ್‌ ಎಸ್. ಕಳಸ್ಕರ್‌, ಆಡಳಿತ ಮಂಡಳಿಯ ಲಕ್ಷ್ಮೀನಾರಾಯಣ್‌ ಇದ್ದರು. ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.