ರಾಮನಗರ: ಶಾಲಾ ಮಕ್ಕಳಲ್ಲಿ ವಿಜ್ಞಾನದ ಅರಿವು ಮೂಡಿಸುವ ಸಲುವಾಗಿ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯವು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಸಂಚಾರಿ ವಿಜ್ಞಾನ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ವಿಶ್ವೇಶ್ವರಯ್ಯ ಮ್ಯೂಸಿಯಂ ವಿಶೇಷವಾಗಿ ರೂಪಿಸಿರುವ ಸಂಚಾರಿ ವಿಜ್ಞಾನ ವಾಹನದಲ್ಲಿ ವಸ್ತು ಪ್ರದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಸ್ ಕಳೆದ ನವೆಂಬರ್ 9ರಿಂದ ಜಿಲ್ಲೆಯಾದ್ಯಂತ ಸಂಚರಿಸಿ ಸರ್ಕಾರಿ ಶಾಲಾ ಮಕ್ಕಳಿಗೆ ವಿಜ್ಞಾನದ ಅರಿವು ಮೂಡಿಸುತ್ತಿದೆ. ಶುಕ್ರವಾರ ಜಿಲ್ಲಾ ಕೇಂದ್ರದಲ್ಲಿ ಸಂಚರಿಸುತ್ತಿರುವ ವಿಜ್ಞಾನ ಪ್ರದರ್ಶನದಲ್ಲಿ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಕಾಲೇಜು, ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
‘ಬೆಂಗಳೂರಿನಲ್ಲಿರುವ ಮ್ಯೂಸಿಯಂಗೆ ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಅವರಲ್ಲಿ ಖಾಸಗಿ ಶಾಲಾ ಹೆಚ್ಚು. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳು ಇರುವ ಕಡೆಯಲ್ಲೇ ವಿಜ್ಞಾನದ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
ಈಗಾಗಲೇ ರಾಮನಗರ ತಾಲ್ಲೂಕಿನ ಬಹುತೇಕ ಕಡೆ ಈ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ನಂತರದಲ್ಲಿ ಮಾಗಡಿ, ಕನಕಪುರ ಮೊದಲಾದ ಕಡೆ ಬಸ್ ಸಂಚರಿಸಲಿದೆ. ವಿಶೇಷವಾಗಿ ಪ್ರೌಢಶಾಲಾ ಪಠ್ಯಕ್ರಮದ ಆಧಾರಿತ ವಿದ್ಯುತ್ ಮತ್ತು ಅಯಸ್ಕಾಂತೀಯ ಗುಣಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ.
‘ಮೊದಲ ದಿನ ವಸ್ತು ಪ್ರದರ್ಶನದ ನಂತರ ಆಯ್ದ ಶಾಲೆಗಳಲ್ಲಿ ವಿಜ್ಞಾನ ವಿಡಿಯೊ ಪ್ರದರ್ಶನ, ವಿಜ್ಞಾನ ಮಾದರಿ ತಯಾರಿಕೆ ಕಾರ್ಯಾಗಾರ ನಡೆಸುತ್ತೇವೆ’ ಎಂದು ವಸ್ತು ಸಂಗ್ರಹಾಲಯದ ಸಿಬ್ಬಂದಿ ತಿಳಿಸಿದರು.
ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯದ ತಾಂತ್ರಿಕ ಸಿಬ್ಬಂದಿಯಾದ ರವಿ, ಉದಯ್ ಪ್ರಕಾಶ್, ಶನೀಶ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.