ಮಾಗಡಿ: ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ನೆಲೆನಿಂತು ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಲು ಎನ್ಎಸ್ ಎಸ್ ಶಿಬಿರ ಸಹಕಾರಿ ಎಂದು ಉಪನ್ಯಾಸಕ ನರಸಿಂಹಮೂರ್ತಿ ತಿಳಿಸಿದರು.
ಬ್ಯಾಲಕೆರೆ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.
ಸೇವೆ ಮಾಡುವ ಮೂಲಕ ಗಾಂಧೀಜಿ ಕನಸಿನ ರಾಮರಾಜ್ಯ, ಗ್ರಾಮ ಸ್ವರಾಜ್ಯ ನಿರ್ಮಿಸಲು ಮುಂದಾಗಬೇಕು. ಗುಡಿ ಕೈಗಾರಿಕೆ ಮರಳಿ ಆರಂಭಿಸಬೇಕು. ಚರ್ಮವಾದ್ಯ ತಯಾರಿಕೆ, ಮರಮುಟ್ಟು, ಗೋಣಿಚೀಲ, ಸೆಣಬಿನ ಕೈಚೀಲ, ಹತ್ತಿಬಟ್ಟೆ ತಯಾರಿಕೆಗೆ ಆದ್ಯತೆ ನೀಡಬೇಕಾಗಿದೆ ಎಂದರು.
ಸಮಾಜವಾದಿ ಚಿಂತಕ ತಗ್ಗಿಕುಪ್ಪೆ ಮುಕುಂದ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ನಡೆಸಬೇಕು. ಕೌಶಲ ರೂಢಿಸಿಕೊಂಡು ಸೇವಾವೃತ್ತಿಗೆ ಅರ್ಪಿಸಿಕೊಳ್ಳಬೇಕು. ಶಾಂತಿ – ಸಹಬಾಳ್ವೆ, ಸರ್ವೋದಯ ತತ್ವ ಅಳವಡಿಸಿಕೊಂಡು ಪರಿಶುದ್ಧ ಜೀವನ ನಡಸಲು ಸೇವೆ ಎಂಬ ವ್ರತವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಶಿಬಿರಾಧಿಕಾರಿ ಡಾ.ನರಸಿಂಹಮೂರ್ತಿ ಎಸ್.ಎನ್, ಉಪನ್ಯಾಸಕರಾದ ಮೃತ್ಯುಂಜಯ, ಚಂದ್ರಶೇಖರ್, ವಿನೋದ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮ್ಸಿಂಗ್, ಶಿಬಿರಾಧಿಕಾರಿಗಳಾದ ಉಮೇಶ್, ರಾಕೇಶ್.ಎನ್, ಅಶೋಕ್ ಮಾತನಾಡಿದರು. ಶಿವಕುಮಾರಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಸಸಿ ನೆಡಲಾಯಿತು. ಬ್ಯಾಲಕೆರೆ ಹೊನ್ನಾದೇವಿ ದೇವಾಲಯದ ಆವರಣದಲ್ಲಿ ಸ್ವಚ್ಛತೆ ಕೈಗೊಳ್ಳಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.