ADVERTISEMENT

ಮೋದಿ ಜನ್ಮದಿನ: ವಿವಿಧ ಕಾರ್ಯಕ್ರಮ

ಬಿಜೆಪಿಯಿಂದ ಇದೇ 20ರವರೆಗೆ ಜಿಲ್ಲೆಯಾದ್ಯಂತ ಸೇವಾ ಸಪ್ತಾಹ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 14:10 IST
Last Updated 16 ಸೆಪ್ಟೆಂಬರ್ 2020, 14:10 IST
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಶಿವಮಾಧು ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಶಿವಮಾಧು ಮಾತನಾಡಿದರು   

ರಾಮನಗರ: ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಜನ್ಮದಿನದ ಅಂಗವಾಗಿ ಇದೇ 20ರವರೆಗೆ ಸೇವಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಷ್ಟ್ರ ಸಮಿತಿಯ ಸದಸ್ಯ ಶಿವಮಾಧು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪಂಡಿತ್ ದೀನ್ ದಯಾಳ ಉಪಾಧ್ಯಾಯ, ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಅಕ್ಟೋಬರ್‌ 2ರವರೆಗೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 17ರಿಂದ 20ರವರೆಗೆ ಮೋದಿ ಜನ್ಮದಿನಾಚರಣೆ ಅಂಗವಾಗಿ ಸೇವಾ ಸಪ್ತಾಹ ನಡೆಯಲಿದೆ. ಜಿಲ್ಲೆಯ 70 ಅಂಗವಿಕಲರಿಗೆ ಅಂಗಜೋಡಣೆ ಉಪಕರಣ, 70 ಬಡವರಿಗೆ ಉಚಿತ ಕನ್ನಡಕಗಳ ವಿತರಣೆ ಮಾಡಲಾಗುವುದು. ಅಂತೆಯೇ ಸರ್ಕಾರಿ ಆಸ್ಪತ್ರೆಗಳಲ್ಲಿ ಒಳರೋಗಿಗಳು ಮತ್ತು ಬಡವರಿಗೆ ಹಣ್ಣು ವಿತರಣೆ, ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಪೈಕಿ 70 ಮಂದಿಗೆ ಪ್ಲಾಸ್ಮ ಚಿಕಿತ್ಸೆ ಕೊಡಿಸುವುದು, ರಕ್ತದಾನ ಶಿಬಿರ ಏರ್ಪಡಿಸುವುದು, ಪ್ರತಿ ಬೂತ್ ವ್ಯಾಪ್ತಿಯಲ್ಲಿ 70 ವೃಕ್ಷಾರೋಪಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು ಮಾತನಾಡಿ, ಜಿಲ್ಲೆಯ 70 ಹಳ್ಳಿಗಳಲ್ಲಿ ಮತ್ತು ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ 70 ಸ್ಥಳಗಳಲ್ಲಿ ಸ್ವಚ್ಚ ಭಾರತ ಅಭಿಯಾನದಡಿ ಸ್ವಚ್ಚ ಸೇವಾ ಕಾರ್ಯಕ್ರಮ, ಪ್ಲಾಸ್ಟಿಕ್ ಬಳಕೆ ಬೇಡ ಎಂಬ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಮದೇವರ ಬೆಟ್ಟದ ರಸ್ತೆಯಲ್ಲಿರುವ ಆಘಾ ಖಾನ್ ಲೇಔಟ್‍ನಲ್ಲಿ 70 ಗಿಡಗಳನ್ನು ನೆಡಲಾಗುವುದು ಎಂದರು.

ADVERTISEMENT

ಮುಖಂಡ ಗುರುಮೂರ್ತಿಮಾತನಾಡಿ ಇದೇ 25ರಂದು ಪಂಡಿತ್ ದೀನ್‍ದಯಾಳ್ ಜಯಂತಿಯ ಅಂಗವಾಗಿ ಎಲ್ಲಾ ಬೂತ್‍ಗಳಲ್ಲಿ ಉಪಾಧ್ಯಾಯ ಅವರ ವಿಚಾರಧಾರೆ ಮತ್ತು ಜೀವನದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಅಕ್ಟೋಬರ್ 2ರಂದು ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಜಯಂತಿ ಅಂಗವಾಗಿ ಪ್ರಧಾನಿಗಳ ಮಹತ್ವಾಕಾಂಕ್ಷಿ ಯೋಜನೆ ಆತ್ಮ ನಿರ್ಭರ ಭಾರತದ ಸಂಕಲ್ಪವನ್ನು ವಿವಿಧ ಪ್ರಾಕಾರಗಳ ಸಂವಾದ ಕಾರ್ಯಕ್ರಮಗಳ ಮೂಲಕ ಜನಮನಗಳಿಗೆ ತಲುಪಿಸುವ ಯೋಚನೆ ಇದೆ ಎಂದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಉಪಾಧ್ಯಕ್ಷ ಸುರೇಶ್, ಮಾಧ್ಯಮ ಪ್ರಮುಖ ಚಂದ್ರಶೇಖರ ರೆಡ್ಡಿ, ರಾಮನಗರ ನಗರ ಘಟಕದ ಅಧ್ಯಕ್ಷ ಪಿ.ಶಿವಾನಂದ, ಗ್ರಾಮಾಂತರ ಘಟಕದ ಅಧ್ಯಕ್ಷ ಗೋಪಾಲ್, ಮುಖಂಡರಾದ ಟಿ.ಕೆ.ಶಾಂತಪ್ಪ, ಪುಷ್ಪಲತಾ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.