ಚನ್ನಪಟ್ಟಣ: ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದ ದಲಿತ ಸಮುದಾಯದ ಸ್ಮಶಾನದಲ್ಲಿ ವ್ಯಕ್ತಿಯ ಶವಸಂಸ್ಕಾರಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿ ಪಟ್ಟಣದ ತಾಲ್ಲೂಕು ಕಚೇರಿಗೆ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ಗ್ರಾಮದಲ್ಲಿ ಒಂದೂವರೆ ಎಕರೆ ಜಮೀನನ್ನು ದಲಿತ ಸಮುದಾಯದ ಸ್ಮಶಾನಕ್ಕೆ ಮೀಸಲಿರಿಸಲಾಗಿದೆ. ಮಂಗಳವಾರ ಸಮುದಾಯದ ವ್ಯಕ್ತಿ ಪುಟ್ಟರಾಮಯ್ಯ (72) ಮೃತಪಟ್ಟಿದ್ದು, ಅವರ ಶವಸಂಸ್ಕಾರ ನಡೆಸಲು ಹೋದಾಗ ಗ್ರಾಮದ
ವ್ಯಕ್ತಿಯೊಬ್ಬರು ಸ್ಮಶಾನದ ಜಾಗ ತಮಗೆ ಸೇರಿದ್ದೆಂದು ಅಡ್ಡಿಪಡಿಸಿ ತಕರಾರು ಮಾಡಿದ್ದಾರೆ. ಅಲ್ಲದೆ, ಶವ ಸಂಸ್ಕಾರ ನಡೆಸಲು ಅವಕಾಶ ಕೊಡಲಿಲ್ಲ ಎಂದು ದೂರಿದರು.
ಸ್ಥಳಕ್ಕೆ ಬಂದ ತಹಶೀಲ್ದಾರ್ ನಾಗೇಶ್ ಕೂಡಲೇ ಸಿಬ್ಬಂದಿ ಜೊತೆ ದೇವದಹೊಸಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಕರೆಸಿ ಸಂಬಂಧಿಸಿದ ಸ್ಥಳದ ದಾಖಲೆಗಳನ್ನು ನೀಡುವಂತೆ ಸೂಚಿಸಿದರು. ಸೂಕ್ತ ದಾಖಲೆ ನೀಡಲು ವಿಫಲನಾದ್ದರಿಂದ ತರಾಟೆಗೆ ತೆಗೆದುಕೊಂಡರು. ಇದು ಸರ್ಕಾರಿ ಜಾಗ ಎಂದು ಅವರು ಸ್ಪಷ್ಟಪಡಿಸಿದರು.
ನಂತರ ವ್ಯಕ್ತಿಯ ಶವಸಂಸ್ಕಾರಕ್ಕೆ ಅನುವು ಮಾಡಿಕೊಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.