ಚನ್ನಪಟ್ಟಣ: ಕವಿ ಡಾ.ಸಿದ್ಧಲಿಂಗಯ್ಯ ಅವರು ನಿಧನರಾದ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸ್ ಠಾಣೆ ಮುಂಭಾಗದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ತಾಲ್ಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶನಿವಾರ ಸಭೆ ಏರ್ಪಡಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಶೇಖರ್ ಮಾತನಾಡಿ, ಸಿದ್ಧಲಿಂಗಯ್ಯ ಅವರು ನಾಡು ಕಂಡ ಅದ್ವಿತೀಯ ಸಾಹಿತಿ. ಅಂಬೇಡ್ಕರ್ ನಂತರ ತಳವರ್ಗದಲ್ಲಿ ಜಾಗೃತಿ ಮೂಡಿಸಿದರು. ಅಂತಹ ಮಹಾನ್ ಚೇತನವನ್ನು ಕಳೆದುಕೊಂಡು ನಾಡು ಬಡವಾಗಿದೆ ಎಂದರು.
ಜೀತಮುಕ್ತ ಕರ್ನಾಟಕ ಸಂಘಟನೆ ಸಂಚಾಲಕ ಪಿ.ಜೆ. ಗೋವಿಂದರಾಜ್ ಮಾತನಾಡಿ, ಸಿದ್ಧಲಿಂಗಯ್ಯ ಅವರು ತಮ್ಮ ಸಾಹಿತ್ಯದ ಮೂಲಕ ಬಂಡಾಯ ಹಾಗೂ ದಲಿತ ಚಳವಳಿಯನ್ನು ಕಟ್ಟಿದರು. ಪರಿಶಿಷ್ಟರ ಜೀವನದಲ್ಲಿ ಬೆಳಕು ಮೂಡಲು ಕಾರಣರಾಗಿದ್ದರು. ಅವರನ್ನು ಕಳೆದುಕೊಂಡು ಇಂದು ಸಮುದಾಯಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ಸಿದ್ಧಲಿಂಗಯ್ಯ ಅವರು ಅತ್ಯಂತ ಕಡುಬಡತನದಲ್ಲಿ ವಿದ್ಯಾಭ್ಯಾಸ ಮಾಡಿ ನಾಡು ಕಂಡರಿಯದ ರೀತಿಯಲ್ಲಿ ಸಾಹಿತ್ಯ ಲೋಕವನ್ನು ಬೆರಗುಗೊಳಿಸಿದರು. ಬಂಡಾಯ ಹಾಗೂ ದಲಿತ ಚಳವಳಿಯ ಹುಟ್ಟಿಗೆ ಕಾರಣರಾದರು. ಅವರ ನೆನಪಿಗಾಗಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಸ್ಥಳದಲ್ಲಿ ಭಾವಚಿತ್ರ ಅಳವಡಿಸಬೇಕು ಎಂದರು.
ಡಿಎಸ್ಎಸ್ ಸಂಚಾಲಕ ಸಿ. ಕುಮಾರ್, ವಿವಿಧ ಸಂಘಟನೆಯ ಪದಾಧಿಕಾರಿಗಳಾದ ಸಿದ್ದರಾಮು, ರವಿ, ರಘುರಾಮ್, ಅಪ್ಪಗೆರೆ ಮಂಜುನಾಥ್, ಅಪ್ಪಗೆರೆ ಪ್ರದೀಪ್, ಎನ್. ಶ್ರೀಕಾಂತ, ಸತೀಶ್, ಬಾಬು, ಮಹೇಶ್, ಗಂಗಾಧರ್, ರಾಂಪುರ ಅರುಣ್, ಕೃಷ್ಣಪ್ಪ ಸಂಕಲಗೆರೆ, ಯೋಗೇಶ್ ಗೌಡ, ಸಿದ್ದರಾಮು ನೀಲಸಂದ್ರ, ಹನುಮಂತಯ್ಯ, ಕಿರಣ್ ಅಪ್ಪಗೆರೆ, ಜೈಪ್ರಕಾಶ್, ಶ್ರೀನಿವಾಸ್ ಅಪ್ಪಗೆರೆ, ಸುರೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.