ಕುದೂರು(ಮಾಗಡಿ): ಸತತ ಅಭ್ಯಾಸವೇ ಸಾಧನೆಯ ಗುಟ್ಟು ಎಂಬ ಹಿರಿಯರ ಅನುಭವದ ಮಾತಿನಂತೆ ಬೇಸಿಗೆ ರಜೆಯಲ್ಲೂ ಓದುವಂತೆ ಪ್ರೇರೇಪಿಸಬೇಕು ಎಂದು ಶಿಕ್ಷಕ ನಾಗರಾಜು ತಿಳಿಸಿದರು.
ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಹುಲಿಕಲ್ ಗ್ರಾಮದ ಪ್ರೌಢಶಾಲೆಯಲ್ಲಿ ಶಿಕ್ಷಣ ಪೌಂಡೇಷನ್ ವತಿಯಿಂದ ನಡೆದ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
ಕಲಿಕೆ ನಿರಂತರವಾಗಿ ನಡೆಯಬೇಕು. ತಿಳಿದುದರಿಂದ ತಿಳಿಯದೆ ಇರುವ ಮಾಹಿತಿಗಳತ್ತ ಮಕ್ಕಳ ಮನಸ್ಸನ್ನು ಕರೆದೊಯ್ಯುವ ಚಟುವಟಿಕೆಗಳನ್ನು ನಡೆಸಬೇಕು. ಕಥೆಗಳನ್ನು ಹೇಳಿಸುವುದು. ಚಿತ್ರ ರಚನೆ, ನಟನೆ, ನರ್ತನ, ಜನಪದ ನೃತ್ಯ , ಪರಿಸರ ಪರಿಚಯ ಮಾಡಿಕೊಡುವುದರ ಮೂಲಕ ರಜೆಯನ್ನೂ ಸದುಪಯೋಗ ಪಡಿಸಿಕೊಳ್ಳಲು ಪೋಷಕರು ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಕಳಿಸ ಬೇಕು ಎಂದರು.
ಬೇಸಿಗೆ ಶಿಬಿರದ ಸಂಯೋಜಕಿ ದೇವಕಿ ಮಾತನಾಡಿ, ಇಂದಿನ ಮಕ್ಕಳೆಲ್ಲರೂ ಕುಶಾಗ್ರಮತಿಗಳಾಗಿದ್ದಾರೆ. ಅವರಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕಾದುದು, ಪೋಷಕರು ಮತ್ತು ಶಿಕ್ಷಕರು ಹಾಗೂ ಸಂಘ ಸಂಸ್ಥೆಗಳ ಕೆಲಸವಾಗಿದೆ. ಮಕ್ಕಳೇ ಮನೆಯ ನಂದಾದೀಪ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಂಡು ಬೆಂಬಲಿಸಬೇಕು ಎಂದರು.
ಶಿಬಿರಾರ್ಥಿಗಳಾದ ಮಧುಮಿತ, ಭವ್ಯಶ್ರೀ, ಮೋನಿಕ, ಕುಶಾಲ್, ಹಿತೇಶ್ಗೌಡ ಅನಿಸಿಕೆ ವ್ಯಕ್ತಪಡಿಸಿದರು. ಎಲ್ಲ ಮಕ್ಕಳಿಗೆ ಉಚಿತ ಲೇಖನ ಸಾಮಗ್ರಿ ಮತ್ತು ನೋಟ್ ಪುಸ್ತಕ ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.