ADVERTISEMENT

ಸ್ವಚ್ಛತೆಗೆ ಮೆಚ್ಚುಗೆ: ₹15 ಸಾವಿರ ಪುರಸ್ಕಾರ

ರಾಮನಗರ ರೈಲು ನಿಲ್ದಾಣಕ್ಕೆ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 14:37 IST
Last Updated 1 ಮಾರ್ಚ್ 2019, 14:37 IST
ರಾಮನಗರ ರೈಲು ನಿಲ್ದಾಣಕ್ಕೆ ಶುಕ್ರವಾರ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್‌ ಸಿಂಗ್‌ ಭೇಟಿ ನೀಡಿ ಪರಿಶೀಲಿಸಿದರು
ರಾಮನಗರ ರೈಲು ನಿಲ್ದಾಣಕ್ಕೆ ಶುಕ್ರವಾರ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್‌ ಸಿಂಗ್‌ ಭೇಟಿ ನೀಡಿ ಪರಿಶೀಲಿಸಿದರು   

ರಾಮನಗರ: ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್‌ ಸಿಂಗ್‌ ಇಲ್ಲಿನ ರೈಲು ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ನಿಲ್ದಾಣದಲ್ಲಿನ ಸ್ವಚ್ಛತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ₹15 ಸಾವಿರ ನಗದು ಬಹುಮಾನವನ್ನೂ ಘೋಷಿಸಿದರು.

ಸಂಜೆ 4.30ರ ಸುಮಾರಿಗೆ ವಿಶೇಷ ರೈಲಿನಲ್ಲಿ ಅವರು ನಿಲ್ದಾಣಕ್ಕೆ ಬಂದರು. ಇಲ್ಲಿನ ಶೌಚಾಲಯ ವ್ಯವಸ್ಥೆ, ಪ್ಲಾಟ್‌ಫಾರ್ಮ್‌ಗಳಲ್ಲಿನ ಸ್ವಚ್ಛತೆ, ಪ್ರಯಾಣಿಕರಿಗೆ ಕುಡಿಯುವ ನೀರು, ಪಾರ್ಕಿಂಗ್ ಸೌಲಭ್ಯ, ಉದ್ಯಾನ, ಟಿಕೆಟ್ ಕೌಂಟರ್, ವಿಶ್ರಾಂತಿ ಮತ್ತು ತಾಂತ್ರಿಕ ಕೊಠಡಿಗಳನ್ನು ಪರಿಶೀಲಿಸಿದರು.

ಶೌಚಾಲಯ ಉನ್ನತೀಕರಣ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ಎದುರಾಗುತ್ತಿರುವ ಸಮಸ್ಯೆಯ ಕುರಿತು ಸ್ಟೇಷನ್ ಮಾಸ್ಟರ್ ಪ್ರಧಾನ ವ್ಯವಸ್ಥಾಪಕರ ಗಮನ ಸೆಳೆದರು. ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ ನೀಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಜಯ್‌ಕುಮಾರ್, ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಿದರು.

ADVERTISEMENT

ವಿವಿಧ ಬೇಡಿಕೆ: ಈ ವೇಳೆ ನೈರುತ್ಯ ರೈಲ್ವೆ -ಬೆಂಗಳೂರು ವಿಭಾಗೀಯ ಬಳಕೆದಾರರ ಸಲಹಾ ಸಮಿತಿ ಸದಸ್ಯ ಜಿ.ವಿ. ಪದ್ಮನಾಭ್ ಹಾಗೂ ಮುಖಂಡರು ಪ್ರಧಾನ ವ್ಯವಸ್ಥಾಪಕರಿಗೆ ಹಲವು ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.

‘ಜಿಲ್ಲಾ ಕೇಂದ್ರವಾದ ರಾಮನಗರ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಬೇಕು. ಈ ನಿಲ್ದಾಣದಲ್ಲಿ ಟಿಪ್ಪು ಎಕ್ಸ್‌ಪ್ರೆಸ್, ಮೈಲಾದುತುರೈ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ಮಾಡಬೇಕು. ಇಲ್ಲಿಯೇ ಪೊಲೀಸ್ ಹೊರ ಠಾಣೆ ಸ್ಥಾಪಿಸಬೇಕು. ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಭದ್ರತೆಯನ್ನು ಹೆಚ್ಚಿಸಬೇಕು. ಪ್ರಯಾಣಿಕರ ಅನುಕೂಲಕ್ಕಾಗಿ ವಾಹನ ನಿಲುಗಡೆ ಪ್ರದೇಶವನ್ನು ವಿಸ್ತರಿಸಬೇಕು’ ಎಂದು ಕೋರಿದರು.

ನಗರಸಭೆ ಸದಸ್ಯರಾದ ಪಿ.ರವಿಕುಮಾರ್, ನಾಗೇಶ್, ಸ್ಟೇಷನ್ ಮಾಸ್ಟರ್ ಉಮೇಶ್ ಹಾಗೂ ನೈರುತ್ಯ ರೈಲ್ವೆಯ ಅಧಿಕಾರಿಗಳು ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.