ADVERTISEMENT

ಅಂಗನವಾಡಿಗೆ ಲಗ್ಗೆ ಇಟ್ಟ ಮಕ್ಕಳು: ಮೊದಲ ದಿನ ಸಿಹಿ ಹಂಚಿ ಸ್ವಾಗತ

ಪೂರ್ವ ಪ್ರಾಥಮಿಕ ತರಗತಿ ಆರಂಭ l ಮೊದಲ ದಿನ ಸಿಹಿ ಹಂಚಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 8:04 IST
Last Updated 9 ನವೆಂಬರ್ 2021, 8:04 IST
ಕೆಂಪೇಗೌಡನದೊಡ್ಡಿ ಗ್ರಾಮದ ಅಂಗನವಾಡಿಯಲ್ಲಿ ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು
ಕೆಂಪೇಗೌಡನದೊಡ್ಡಿ ಗ್ರಾಮದ ಅಂಗನವಾಡಿಯಲ್ಲಿ ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು   

ರಾಮನಗರ: ಒಂದೂವರೆ ವರ್ಷದ ಬಳಿಕ ಸೋಮವಾರ ಜಿಲ್ಲೆಯಾದ್ಯಂತ ಪೂರ್ವ ಪ್ರಾಥಮಿಕ ಕಲಿಕಾ ಕೇಂದ್ರಗಳು ಆರಂಭವಾದವು. ಅಂಗನವಾಡಿಗಳಲ್ಲಿ ಚಿಣ್ಣರ ಕಲರವ ಕೇಳಿಬಂದರೆ, ಖಾಸಗಿ ಶಾಲೆಗಳಲ್ಲಿ ಸಿದ್ಧತೆಯ ಕೊರತೆ ಕಂಡುಬಂದಿತು.

ರಾಜ್ಯದಾದ್ಯಂತ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾದ ಹಿನ್ನೆಲೆಯಲ್ಲಿ ಅಂಗನವಾಡಿಗಳು ಹಾಗೂ ಎಲ್‌ಕೆಜಿ, ಯುಕೆಜಿ ತರಗತಿಗಳ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಅಂಗನವಾಡಿಗಳಲ್ಲಿ ಸಂಭ್ರಮ ಕಂಡುಬಂದಿತು.

ಕೇಂದ್ರಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಗ್ರಾಮ ಪಂಚಾಯಿತಿ, ಬಾಲವಿಕಾಸ ಸಮಿತಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ಸಿಹಿ ಹಂಚಿ ಬರಮಾಡಿಕೊಳ್ಳಲಾಯಿತು. ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ತರಗತಿಗಳು ನಡೆದವು.

ADVERTISEMENT

ಸದ್ಯ ಅಂಗನವಾಡಿಗಳಲ್ಲಿ ಬಿಸಿಯೂಟ ವಿತರಣೆ ಇಲ್ಲ. ಮುಂದಿನ ಹತ್ತು ದಿನಗಳ ಕಾಲ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುವುದು. ಇಂದು ಮಕ್ಕಳಿಗೆ ಸಿಹಿ ಮಾತ್ರ ವಿತರಣೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಅಂಗನವಾಡಿಗಳ ಎಲ್ಲ ಶಿಕ್ಷಕರು ಹಾಗೂ ಸಹಾಯಕರು ಕೋವಿಡ್‌ನ ಎರಡೂ ಡೋಸ್ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಹಾಗೆಯೇ ಲಸಿಕೆ ಪಡೆದಿರುವ ಪೋಷಕರ ಮಕ್ಕಳಿಗಷ್ಟೇ ಪ್ರವೇಶ ನೀಡಲಾಗುತ್ತದೆ ಎಂದು ತಿಳಿಸಿದರು.

ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳ ಆರಂಭಕ್ಕೂ ಸಹ ಸರ್ಕಾರ ಅನುಮತಿ ನೀಡಿದೆ. ಆದರೂ, ಹೆಚ್ಚಿನ ಕಡೆಗಳಲ್ಲಿ ಸೋಮವಾರ ತರಗತಿಗಳು ನಡೆಯಲಿಲ್ಲ. ಸಿದ್ಧತೆ ಕೊರತೆಯಿಂದಾಗಿ ಹೀಗಾಗಿದ್ದು, ಮುಂದಿನ ವಾರದಿಂದಲೇ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುವುದಾಗಿ ಶಾಲೆಗಳ ಆಡಳಿತ ಮಂಡಳಿಯ ಮುಖ್ಯಸ್ಥರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.