ADVERTISEMENT

ಮಾಗಡಿ: ಮರಗಳ ಮಾರಣಹೋಮ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 5:20 IST
Last Updated 29 ಜುಲೈ 2021, 5:20 IST
ಮಾಗಡಿ ಕುಣಿಗಲ್‌ ರಸ್ತೆಯ ಚಂದೂರಾಯನಹಳ್ಳಿ ಬಳಿ ಬೃಹತ್‌ ಆಲದ ಮರಗಳನ್ನು ಕತ್ತರಿಸಲಾಗುತ್ತಿದೆ
ಮಾಗಡಿ ಕುಣಿಗಲ್‌ ರಸ್ತೆಯ ಚಂದೂರಾಯನಹಳ್ಳಿ ಬಳಿ ಬೃಹತ್‌ ಆಲದ ಮರಗಳನ್ನು ಕತ್ತರಿಸಲಾಗುತ್ತಿದೆ   

ಮಾಗಡಿ: ತಾಲ್ಲೂಕಿನ ರಸ್ತೆಬದಿ ಬೆಳೆದಿದ್ದ ಬೃಹತ್‌ ಮರಗಳನ್ನು ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕಡಿಯಲಾಗುತ್ತಿದೆ.

ಮರಗಳನ್ನು ಸ್ವಯಂ ಚಾಲಿತ ಗರಗಸ ಬಳಸಿ ಕತ್ತರಿಸುತ್ತಿದ್ದ ಮರಗಳಲ್ಲಿ ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು ಮರಿ ಮಾಡಿಕೊಂಡಿದ್ದ ಪಕ್ಷಿಗಳ ಆಕ್ರಂದನ ಕರ್ಣ ಕಠೋರವಾಗಿದೆ ಎಂದು ಪರಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ನೈಸ್‌ ರಸ್ತೆಯಿಂದ ಮಾಗಡಿ ಪಟ್ಟಣದ ವರಗೆ ಚತುಷ್ಪಥ ಮತ್ತು ಮಾಗಡಿಯಿಂದ ಸೋಮುವಾರ ಪೇಟೆವರೆಗೆ, ಪಟ್ಟಣದ ಅಂಬೇಡ್ಕರ್‌ ಸರ್ಕಲ್‌ ನಿಂದ ತಾಳೆಕೆರೆ ಹ್ಯಾಂಡ್‌ ಪೋಸ್ಟ್‌ವರೆಗೆ ದ್ವಿಪಥ ರಸ್ತೆ ನಿರ್ಮಾಣವಾಗುತ್ತಿದೆ. ರಸ್ತೆಬದಿ ಬಿಸಿಲು ನೆಲಕ್ಕೆ ಬೀಳದಂತೆ ಬೃಹದಾಕಾರವಾಗಿ ಬೆಳೆದಿದ್ದ ಆಲ, ಅರಳಿ, ನೇರಳೆ, ಮಾವು, ಹಿಪ್ಪೆ, ಹೊಂಗೆ, ಬೇವು, ಗೋಣಿಮರ, ಬೂರುಗದ ಮರಗಳನ್ನು ಕತ್ತರಿಸಲಾಗುತ್ತಿದೆ.ನಿರಂತರವಾಗಿ ಮರಗಳ ಮಾರಣಹೋಮ ನಡೆದಿದೆ.

ADVERTISEMENT

ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡುವುದು ಎಷ್ಟು ಸರಿ, ಕೆಲವು ಕಡೆ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗದಿದ್ದರೂ ಬೃಹತ್‌ ಮರಗಳನ್ನು ಧರೆಗೆ ಉರುಳಿಸಲಾಗಿದೆ ಎಂಬುದು ಜನರ ದೂರು. ಈಗಾಗಲೇ ರಸ್ತೆ ನಿರ್ಮಾಣವಾಗಿರುವ ಮಾಗಡಿ ಹುಲಿಯೂರು ದುರ್ಗ ರಸ್ತೆ ಮತ್ತು ತಾಳೆಕೆರೆ ಹ್ಯಾಂಡ್‌ಪೋಸ್ಟ್‌ ವರೆಗಿನ ರಸ್ತೆಬದಿ ಸಸಿಗಳನ್ನು ನೆಟ್ಟು ಬೆಳೆಸಲು ಲೋಕೋಪಯೋಗಿ ಇಲಾಖೆ ಅಥವಾ ಅರಣ್ಯ ಇಲಾಖೆ ಮುಂದಾಗಬೇಕಿದೆ ಎಂದು ಪರಿಸರವಾದಿಗಳು ಮನವಿ ಮಾಡಿದ್ದಾರೆ.

ಮರಗಳನ್ನು ಕಡಿದು ಹಾಕುತ್ತಿರುವುದರಿಂದ ಸಂಕಟಕ್ಕೆ ಸಿಲುಕಿರುವ ಪಕ್ಷಿಗಳಿಗೆ ಆಸರೆ ನೀಡಲು ಅರಣ್ಯ ಇಲಾಖೆ ಸಸಿಗಳನ್ನು ನೆಡಬೇಕು ಎಂದು ಚಂದೂರಾಯನಹಳ್ಳಿ ಜಿ. ಕೃಷ್ಣ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.