ಮಾಗಡಿ: ಪಟ್ಟಣದ ರೇಷ್ಮೆ ಇಲಾಖೆ ಫಾರಂ ಹಿಂದಿನ ಖಾಸಗಿ ಭೂಮಿಯಲ್ಲಿ ಕಳಚೂರ್ಯ ಅರಸರ ಆಳ್ವಿಕೆಯ ಕಾಲದ 4 ವೀರಗಲ್ಲುಗಳು ಪತ್ತೆಯಾಗಿವೆ. ಬಸವ ಚಳವಳಿ ಮೇಲೆ ವಿಶೇಷವಾಗಿ ಬೆಳಕು ಚೆಲ್ಲುವ ವೀರಗಲ್ಲುಗಳ ಬಗ್ಗೆ ತಪಸ್ಪರ್ಶಿ ಅಧ್ಯಯನ ನಡೆಯಬೇಕಿದೆ ಎಂದು ಕನ್ನಡ ಸಹೃದಯ ಬಳಗದ ಅಧ್ಯಕ್ಷ ಹಾಗೂ ಇತಿಹಾಸ ಸಂಶೋಧಕ ಡಾ.ಮುನಿರಾಜಪ್ಪ ತಿಳಿಸಿದರು.
‘ವ್ಯಕ್ತಿಯೊಬ್ಬ ಕರಡಿಯೊಡನೆ ಹೋರಾಡಿ ಮಡಿದಿರುವ ವೀರಗಲ್ಲು ಇತ್ತೀಚಿನ ಕಾಲಮಾನಕ್ಕೆ ಸೇರಿದೆ. ಮೂರು ವೀರಗಲ್ಲುಗಳು ಕಳಚೂರ್ಯರ ಕಾಲದ ಆಡಳಿತ ಮತ್ತು ಜನಜೀವನದ ಬಗ್ಗೆ ಮಾಹಿತಿ ನೀಡಲಿದೆ. ವೀರಗಲ್ಲುಗಳನ್ನು ರಕ್ಷಿಸಲು ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಮುಂದಾಗಬೇಕು. ಇತಿಹಾಸ ಸಂಶೋಧಕರು ಭೇಟಿ ನೀಡಿ ಸಂಶೋಧನೆ ನಡೆಸಿ, ಕೆಂಪೇಗೌಡರ ಮಾಗಡಿ ಸೀಮೆ ಮತ್ತು ಕಳಚೂರ್ಯರ ಆಳ್ವಿಕೆಯ ಕಾಲದಲ್ಲಿ ಇದ್ದ ಸಂಬಂಧಗಳ ಬಗ್ಗೆ ಸಂಶೋಧನೆಯ ಮೂಲಕ ಬೆಳಕು ಚೆಲ್ಲಬೇಕಿದೆ’ ಎಂದರು.
ಕನ್ನಡ ಸಹೃದಯ ಬಳಗದ ಪ್ರಧಾನ ಕಾರ್ಯದರ್ಶಿ ಹಾಗೂ ನಿವೃತ್ತ ಶಿಕ್ಷಕ ಬಿ.ಎಂ.ಮಾರಣ್ಣ ಮಾತನಾಡಿ ‘ವೆಂಕಟಯ್ಯನ ಪಾಳ್ಯದ ಬಳಿ ಇರುವ ಕೆಂಪೇಗೌಡರ ಕಾಲದ ಕಲಾತ್ಮಕ ಈಶ್ವರ ಗುಡಿ ಮತ್ತು ಬೈಚಾಪುರದಲ್ಲಿನ ವರದರಾಜ ಸ್ವಾಮಿ ದೇವಾಲಯಗಳನ್ನು ಹಾಗೂ ವೀರಗಲ್ಲುಗಳನ್ನು ರಕ್ಷಿಸಿ ಮಾಗಡಿ ಸೀಮೆಯ ಮಹತ್ವದ ಚಾರಿತ್ರಿಕ ದಾಖಲೆಗಳನ್ನು ರಕ್ಷಿಸಬೇಕು’ ಎಂದರು.
ಬಳಗದ ಉಪಾಧ್ಯಕ್ಷ ಡಿ.ರಾಮಚಂದ್ರಯ್ಯ, ಖಜಾಂಚಿ ಎಂ.ಕೆ.ಶಿವಲಿಂಗಯ್ಯ, ಸುರೇಶ್, ಈರಣ್ಣ ನಾಯಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.