ಕನಕಪುರ: ‘ಜಾನುವಾರುಗಳಿಗೆ ತಗಲುತ್ತಿರುವ ಕಾಲುಬಾಯಿ ಜ್ವರವನ್ನು ತಡೆಗಟ್ಟಲು ಸರ್ಕಾರದಿಂದ ಉಚಿತವಾಗಿಲಸಿಕೆ ನೀಡಲಾಗುತ್ತಿದೆ. ರೈತರು ತಪ್ಪದೆ ರಾಸುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು’ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಯು.ಸಿ. ಕುಮಾರ್ ತಿಳಿಸಿದರು.
ತಾಲ್ಲೂಕಿನ ಬರಡನಹಳ್ಳಿಯಲ್ಲಿ ಸೋಮವಾರ ಎರಡನೇ ಸುತ್ತಿನ ಕಾಲುಬಾಯಿ ಜ್ವರದ ವಿರುದ್ಧ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಹಾಲು ಕರೆಯುತ್ತಿರುವ ರಾಸುಗಳಿಗೆ ಲಸಿಕೆ ಹಾಕಿಸಿದರೆ ಹಾಲು ಕಡಿಮೆ ಆಗುತ್ತದೆ ಎಂಬ ಕಾರಣದಿಂದ ಲಸಿಕೆ ಹಾಕಿಸದೆ ಸುಮ್ಮನಾಗುತ್ತಾರೆ. ಒಂದು ರಾಸು ಲಸಿಕೆಯಿಂದ ತಪ್ಪಿಸಿಕೊಂಡರೆ ಅದಕ್ಕೆ ಕಾಲುಬಾಯಿ ಜ್ವರ ಬಂದು ಬೇರೆ ರಾಸುಗಳಿಗೆ ಹರಡುತ್ತದೆ. ಅದಕ್ಕಾಗಿ ಪೂರ್ಣ ಪ್ರಮಾಣದಲ್ಲಿ ರೋಗ ತಡೆಗಟ್ಟಲು ಕಡ್ಡಾಯವಾಗಿ ಎಲ್ಲಾ ರಾಸುಗಳಿಗೆ ಲಸಿಕೆ ಹಾಕಿಸಬೇಕು ಎಂದರು.
ತಾಲ್ಲೂಕಿನಲ್ಲಿ 1.8 ಲಕ್ಷ ಜಾನುವಾರುಗಳಿವೆ. ಒಂದು ತಿಂಗಳ ಕಾಲ ಲಸಿಕೆ ಅಭಿಯಾನ ಕಾರ್ಯಕ್ರಮ ನಡೆಯುತ್ತದೆ ಎಂದು ಹೇಳಿದರು.
ಚಾಕನಹಳ್ಳಿ ಪಶು ಆಸ್ಪತ್ರೆ ವೈದ್ಯೆ ಡಾ.ಪಂಕಜಾ, ಗ್ರಾಮ ಪಂಚಾಯಿತಿ ಸದಸ್ಯ ಸುಮಂತ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.