ಮಾಗಡಿ: ಪಟ್ಟಣದ ಪ್ರಮುಖ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಟ್ಟು, ಪುತ್ಥಳಿ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಭರವಸೆ ನೀಡಿದರು.
ಪಟ್ಟಣದ ಶಿವಕುಮಾರ ಸ್ವಾಮೀಜಿ ಭವನದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ವತಿಯಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮಹರ್ಷಿ ವಾಲ್ಮೀಕಿ ಅವರು ಹಿಂದೂ ಧರ್ಮಕ್ಕೆ ದೊಡ್ಡ ಗ್ರಂಥವನ್ನು ಕೊಡುಗೆಯಾಗಿ ನೀಡಿದ್ದು, ಅವರ ಪ್ರತಿಮೆ ನಿರ್ಮಾಣಕ್ಕೆ ವಾಲ್ಮೀಕಿ ಸಮುದಾಯದವರು ಮುಂದಾಗಬೇಕು. ಪ್ರಮುಖ ವೃತ್ತಕ್ಕೆ ಹೆಸರಿಡುವ ಕೆಲಸ ಮಾಡುತ್ತೇನೆ. ಮುಂದಿನ ವರ್ಷ ಪ್ರತಿಮೆ ಹಾಗೂ ಹೆಸರು ನಾಮಕರಣ ಕಾರ್ಯಕ್ರಮ ಎರಡೂ ನಡೆಯುತ್ತವೆ’ ಎಂದರು.
ವಾಲ್ಮೀಕಿ ಸಮುದಾಯ ಭವನವನ್ನು ಕುದೂರಿನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಸಂಪೂರ್ಣ ಸಹಕಾರವಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ತಿ.ನಾ.ಪದ್ಮನಾಭ ಮಾತನಾಡಿ, ಬೇಡ ಜನಾಂಗದಲ್ಲಿ ಹುಟ್ಟಿದರೂ 24 ಸಾವಿರ ಶ್ಲೋಕಗಳಿರುವ ರಾಮಾಯಣ ಗ್ರಂಥವನ್ನು ಬರೆದು ನಮಗೆ ಕೊಟ್ಟಿದ್ದಾರೆ. ಕಳೆದ ಬಾರಿ ಕಸಾಪ ವತಿಯಿಂದ ಪ್ರೌಢಶಾಲಾ ಮಕ್ಕಳಿಗೆ ರಾಮಾಯಣ ಪರೀಕ್ಷೆ ಮಾಡಲಾಗಿದ್ದು, ಮುಂದೆ ಕೂಡ ಮಕ್ಕಳಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
ಸಮುದಾಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಸಮುದಾಯದ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು.
ತಹಶೀಲ್ದಾರ್ ಶರತ್ ಕುಮಾರ್, ಜೈಪಾಲ್, ಬಿಇಒ ಚಂದ್ರಶೇಖರ್, ಹೊನ್ನಾಪುರ ಲಿಖಿತ್, ಬಣ್ಣದ ಹನುಮಂತಯ್ಯ, ಕಲ್ಕೆರೆ ಶಿವಣ್ಣ, ಕುದೂರು ಮಂಜೇಶ್, ನರಸಿಂಹಮೂರ್ತಿ, ಶಿವಪ್ರಸಾದ್, ಎಂ.ಕೆ.ಧನಂಜಯ್ಯ, ದೇವೇಂದ್ರಪ್ಪ, ಮುನಿರಾಜು, ನಂಜುಂಡಪ್ಪ,
ಅನಿಲ್ ಕುಮಾರ್, ಶಿವಕುಮಾರ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.