ADVERTISEMENT

ಟಿಪ್ಪು ಜಯಂತಿ ಆಚರಣೆಗೆ ವಾಟಾಳ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 13:11 IST
Last Updated 2 ಆಗಸ್ಟ್ 2019, 13:11 IST
ರಾಮನಗರದಲ್ಲಿ ಶುಕ್ರವಾರ ವಾಟಾಳ್‌ ನಾಗರಾಜು ಪ್ರತಿಭಟನೆ ನಡೆಸಿದರು
ರಾಮನಗರದಲ್ಲಿ ಶುಕ್ರವಾರ ವಾಟಾಳ್‌ ನಾಗರಾಜು ಪ್ರತಿಭಟನೆ ನಡೆಸಿದರು   

ರಾಮನಗರ: ರಾಜ್ಯ ಸರ್ಕಾರವು ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಕೈಬಿಟ್ಟಿರುವ ಆದೇಶವನ್ನು ಹಿಂಪಡೆದು ಜಯಂತಿಯನ್ನು ವೈಭವಯುತವಾಗಿ ಆಚರಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜು ಒತ್ತಾಯಿಸಿದರು.

ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಕಪ್ಪು ಬಾವುಟ ಪ್ರದರ್ಶಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ಟಿಪ್ಪು ಸುಲ್ತಾನ್‌ ಈ ದೇಶದ ಅಪ್ರತಿಮ ಹೋರಾಟಗಾರ. ದೇಶಕ್ಕಾಗಿ ತನ್ನೆರಡು ಮಕ್ಕಳನ್ನು ಒತ್ತೆ ಇಟ್ಟ ವ್ಯಕ್ತಿ. ರಾಷ್ಟ್ರಪತಿಗಳೇ ಅವರ ಗುಣಗಾನ ಮಾಡಿದ್ದಾರೆ. ಶೃಂಗೇರಿ ಮಠಕ್ಕೆ ಕೊಡುಗೆ, ರೇಷ್ಮೆ ಕೈಗಾರಿಕೆ ಅಭಿವೃದ್ಧಿ ಸೇರಿದಂತೆ ಹಲವು ಕೊಡುಗೆಗಳನ್ನು ಟಿಪ್ಪು ನಾಡಿಗೆ ನೀಡಿದ್ದಾರೆ. ಆತನ ಹುಟ್ಟೂರಾದ ದೇವನಹಳ್ಳಿ ರಸ್ತೆಗೆ ಟಿಪ್ಪು ಹೆಸರು ಇಡಬೇಕು. ದೇವನಹಳ್ಳಿಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.

ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಕೇವಲ ಹಿಂದುಗಳ ವಿರುದ್ಧ ದಾಖಲಾದ ಪ್ರಕರಣಗಳು ಮಾತ್ರವಲ್ಲ, ಎಲ್ಲರ ಮೇಲೆ ಹಾಕಿರುವ ಪ್ರಕರಣಗಳನ್ನೂ ಹಿಂಪಡೆಯಬೇಕು. ರೈತರು, ಕನ್ನಡಪರ ಹೋರಾಟಗಾರ ಮೇಲೆ ದಾಖಲಾದ ಎಲ್ಲ ಪ್ರಕರಣಗಳನ್ನೂ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು. ಭಾನುವಾರ ಟಿಪ್ಪು ಸುಲ್ತಾನ್‌ ಸಮಾಧಿ ಮುಂದೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.

ADVERTISEMENT

ನೀರು ಹರಿಸುವುದು ನಿಲ್ಲಿಸಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಗಾಲದಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆ ಇದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕುಎಂದರು.

ಮೂರು ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳು ಬದಲಾಗುತ್ತಿದ್ದಾರೆ. ಅವರು ಬದಲಾದಂತೆಲ್ಲ ಜಯಂತಿಗಳೂ ಬದಲಾಗುತ್ತಿವೆ. ವರ್ಗಾವರ್ಗಿಯಿಂದ ಆಡಳಿತ ಯಂತ್ರ ಕುಸಿದಿದೆ ಎಂದು ಆರೋಪಿಸಿದರು. ಹೊಸ ಸರ್ಕಾರ ಮೇಕೆದಾಟು ಯೋಜನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಪಾರ್ಥ, ಜಗದೀಶ್‌, ಗಾಯತ್ರಿ ಸೇರಿದಂತೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.