ADVERTISEMENT

ಕಾಂಗ್ರೆಸ್‌ ಅಭ್ಯರ್ಥಿಗೆ ವಿಶ್ವಕರ್ಮ ಸಮಯದಾಯದ ಬೆಂಬಲ: ಶ್ರೀನಿವಾಸಾಚಾರ್‌

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 13:53 IST
Last Updated 16 ಏಪ್ರಿಲ್ 2019, 13:53 IST
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿಶ್ವಕರ್ಮ ಸಮುದಾಯದ ಮುಖಂಡ ಶ್ರೀನಿವಾಸಾಚಾರ್‌ ಮಾತನಾಡಿದರು
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿಶ್ವಕರ್ಮ ಸಮುದಾಯದ ಮುಖಂಡ ಶ್ರೀನಿವಾಸಾಚಾರ್‌ ಮಾತನಾಡಿದರು   

ರಾಮನಗರ: ‘ಹಿಂದಿನ ಕಾಂಗ್ರೆಸ್‌ ಹಾಗೂ ಈಗಿನ ಮೈತ್ರಿ ಸರ್ಕಾರವು ವಿಶ್ವಕರ್ಮ ಸಮುದಾಯಕ್ಕೆ ಹಲವು ಕೊಡುಗೆ ನೀಡಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಸಮುದಾಯವು ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಲಿದೆ’ ಎಂದು ಸಮುದಾಯದ ಮುಖಂಡ ಶ್ರೀನಿವಾಸಾಚಾರ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ ಸಮುದಾಯದ 45 ಲಕ್ಷ ಜನರು ಇದ್ದಾರೆ. ಈಚಿನವರೆಗೂ ನಮ್ಮ ಸಮುದಾಯಕ್ಕೆ ಸರ್ಕಾರದ ನೆರವು ಮರೀಚಿಕೆಯಾಗಿತ್ತು. ಜನರ ಹೋರಾಟದ ಫಲವಾಗಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಲ್ಲದೆ, ವಿಶ್ವಕರ್ಮ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಜಾರಿಗೆ ತಂದರು. ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರ ಸ್ಥಾಪಿಸಿ ಅನುದಾನ ಒದಗಿಸಿದ್ದಾರೆ. ಇದರ ಋಣವು ಸಮುದಾಯದ ಜನರ ಮೇಲಿದೆ’ ಎಂದರು.

‘ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 1.2 ಲಕ್ಷದಷ್ಟು ವಿಶ್ವಕರ್ಮರು ಇದ್ದು, ಡಿ.ಕೆ. ಸುರೇಶ್‌ರನ್ನು ಬೆಂಬಲಿಸಲಿದ್ದೇವೆ’ ಎಂದರು.

ADVERTISEMENT

ಜೆಡಿಎಸ್ ಮುಖಂಡ ಉಮೇಶ್‌ ಮಾತನಾಡಿ ‘ಹಿಂದುಳಿದವರಿಗೆ ರಾಜಕೀಯ ಸ್ಥಾನಮಾನ ಸಿಗಲು ದೇವೇಗೌಡರು ಕಾರಣ. ಆದಾಗ್ಯೂ ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯ ಪ್ರಾಮುಖ್ಯತೆ ಸಿಗಬೇಕಿದೆ. ಮುಂದಿನ ದಿನಗಳಲ್ಲಿ ಎಲ್ಲ ಪಕ್ಷಗಳು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ನಾಗೇಶ್, ರಾಧಾ, ಚನ್ನಕೇಶವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.