ಮಾಗಡಿ: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಟ್ಟಿರುವುದರಿಂದ ಏನಾದರೂ ಕೊಡುಗೆ ಸಿಗುತ್ತಾ ಎಂದು ಮಾಜಿ ಶಾಸಕ ಎ.ಮಂಜುನಾಥ್ ಪ್ರಶ್ನಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಮಾತನಾಡಿದ ಅವರು, ರಾಮನಗರ ಹೆಸರು ಬದಲಾವಣೆಯಿಂದ ಏನೂ ಆಗುವುದಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆ ತಂದರೆ ಎಲ್ಲ ಹೂಡಿಕೆದಾರರು ಜಿಲ್ಲೆಗೆ ಬಂದು ಬಿಡುತ್ತಾರೆ. ಭೂಮಿ ಬೆಲೆ ದುಪ್ಪಟ್ಟಾಗುತ್ತದೆ ಎಂದು ಶಾಸಕ ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ. ಈಗ ಹೆಸರು ಬದಲಾವಣೆ ಆಗಿದೆ. ಕೆಲವು ಕಚೇರಿಗಳಲ್ಲಿ ಹೆಸರು ಬದಲಾಣೆ ಮಾಡಿಕೊಂಡಿದ್ದಾರೆ. ಹೆಸರು ಬದಲಾವಣೆ ಆದ ಮೇಲೆ ಭೂಮಿ ಬೆಲೆ 1ರಿಂದ 4ಅಥವಾ 10ಪಟ್ಟು ದುಪ್ಪಟಾಗಿದೆಯೇ ಎಂದು ಪ್ರಶ್ನಿಸಿದರು.
ಬೆಂಗಳೂರಿಗೆ ಕೇವಲ 40ಕಿ.ಮೀ.ದೂರ ಇದ್ದರೂ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿವೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಮಯದಲ್ಲಿ ಸರ್ಕಾರಿ ಕಟ್ಟಡಗಳು ನಿರ್ಮಾಣವಾಗಿದ್ದು ಬಿಟ್ಟರೆ ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷವಾದರೂ ಹಲವು ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಎಂದರು.
ತಾಲ್ಲೂಕು ಕಚೇರಿಯಲ್ಲಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಬೇಕು ಎನ್ನುವ ನಿಟ್ಟಿನಲ್ಲಿ ತಹಶೀಲ್ದಾರ್ ಕೂಡಿಸಿಕೊಂಡು ಸಮಸ್ಯೆ ಬಗೆಹರಿಸಬಹುದಾ ಇಲ್ಲವೇ ಮೇಲಿನ ಹಂತಕ್ಕೆ ಹೋಗಬೇಕಾ ಎಂದು ಇಂದಿನ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗಿದೆ ಎಂದರು.
ತಾಲ್ಲೂಕು ಕಚೇರಿಯಲ್ಲಿ ಉಳುಮೆ ಚೀಟಿ, ರಸ್ತೆ, ಖಾತೆ ಸಮಸ್ಯೆ ಜತೆಗೆ ರಿಕಾರ್ಡ್ ರೂಂನಲ್ಲಿ ಅರ್ಜಿ ಸಲ್ಲಿಸಿದರೂ ದಾಖಲಾತಿ ಒದಗಿಸುತ್ತಿಲ್ಲ ಎಂಬ ಹಲವು ಸಮಸ್ಯೆಗಳಿವೆ. ರೆಕಾರ್ಡ್ ರೂಂನಲ್ಲಿರುವ ಕಡತ ಕೆಲವರು ಕದ್ದು ತೆಗೆದುಕೊಂಡು ಹೋಗಿದ್ದಾರೆ. ದಾಖಲೆಗಳನ್ನು ಹುಡುಕಿಸಿ ಕೊಡಿ ಎಂದು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿಲಾಗಿದೆ ಎಂದರು.
ಮಾಗಡಿಯಿಂದ ಬೆಂಗಳೂರಿಗೆ ಹವಾ ನಿಯಂತ್ರಿತ ಬಸ್ ಸಂಚರಿಸುತ್ತಿದ್ದವು. ಈಗ ಆ ಬಸ್ ನಿಲ್ಲಿಸಲಾಗಿದೆ. ಈ ನಡೆ ಸರಿಯಲ್ಲ ಎಂದರು.
ಇದೇ ವೇಳೆ ತಹಶೀಲ್ದಾರ್ ಶರತ್ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.