ರಾಮನಗರ: ಇಲ್ಲಿನ ಎಪಿಎಂಸಿ ಎದುರು ಇರುವ ಸ್ಮಶಾನದಲ್ಲಿನ ವಿದ್ಯುತ್ ಚಿತಾಗಾರ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆ ಆಗದೇ ಉಳಿದಿದ್ದು, ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
ನಿರ್ಮಾಣ ಕಾಮಗಾರಿ ಆರಂಭಗೊಂಡು ಆರು ವರ್ಷ ಕಳೆದರೂ ಈ ವಿದ್ಯುತ್ ಚಿತಾಗಾರ ಇನ್ನೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ. ಹೀಗಾಗಿ, ಜನರು ಹಳೇ ಸ್ಮಶಾನದಲ್ಲಿ, ಮಳೆ ನೀರು ಸೋರುವಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕಿದೆ.
ಜಿಲ್ಲೆಯಲ್ಲಿ ಹೈಟೆಕ್ ಸ್ಮಶಾನ ನಿರ್ಮಾಣದ ಉದ್ದೇಶ ಹೊತ್ತು ನಗರದ ಎಪಿಎಂಸಿ ಎದುರಿನ ಹಿಂದೂ ರುದ್ರಭೂಮಿಯಲ್ಲಿ 2016–17ರಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಕಟ್ಟಡ ಕಟ್ಟಿ ವರ್ಷಗಳೇ ಕಳೆದರೂ ಇನ್ನೂ ಅಗತ್ಯವಾದ ಯಂತ್ರೋಪಕರಣ ಬಳಸಿ ಚಿತಾಗಾರವನ್ನು ಬಳಕೆಗೆ ಮುಕ್ತಗೊಳಿಸಿಲ್ಲ.
‘ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥಿತವಾದ ಚಿತಾಗಾರ ನಿರ್ಮಾಣ ಆಗಬೇಕು ಎನ್ನುವ ಸಾರ್ವಜನಿಕರ ಒತ್ತಾಯದ ಸಲುವಾಗಿ ಸರ್ಕಾರ ಆರೇಳು ವರ್ಷದ ಹಿಂದೆಯೇ ಈ ಕಾಮಗಾರಿಗೆ ಚಾಲನೆ ನೀಡಿತ್ತು. ತೆವಳುತ್ತಲೇ ಇದ್ದ ಕಾಮಗಾರಿ ಕಡೆಗೂ ಮುಕ್ತಾಯ ಹಂತ ತಲುಪಿದ್ದರೂ ಉದ್ಘಾಟನೆ ಮಾಡದಿರುವುದು ಸರಿಯಲ್ಲ’ ಎಂದು ಆಕ್ಷೇಪಿಸುತ್ತಾರೆ ಐಜೂರು ನಿವಾಸಿಗಳು.
ಏನೇನು ಸೌಲಭ್ಯ: ಶವ ಸಂಸ್ಕಾರಕ್ಕೆ ಅಗತ್ಯವಾದ ಆಧುನಿಕ ತಂತ್ರಜ್ಞಾನವನ್ನು ಒಳಗೊಳ್ಳಲಿರುವ ಈ ಚಿತಾಗಾರದಲ್ಲಿ ಹಿಂದೂ ಸಂಪ್ರದಾಯಕ್ಕೆ ಅನುಗುಣವಾಗಿ ಅವಶ್ಯವಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ವಿದ್ಯುತ್ ಹಾಗೂ ಗ್ಯಾಸ್ ಮೂಲಕ ಶವ ಸುಡುವ ವ್ಯವಸ್ಥೆ ಬರಲಿದೆ. ಎರಡೂ ವ್ಯವಸ್ಥೆಗಳು ಪ್ರತ್ಯೇಕವಾಗಿ ಇರಲಿವೆ. ಇದಲ್ಲದೆ ಶ್ರಾದ್ಧ ಭವನ, ಸ್ನಾನಗೃಹ, ಶೌಚಾಲಯಗಳು, ಪುಟ್ಟದೊಂದು ಉದ್ಯಾನವನ್ನು ಇಲ್ಲಿನ ಸ್ಮಶಾನ ಒಳಗೊಳ್ಳಲಿದೆ.
ಚಿತಾಗಾರ, ಶ್ರಾದ್ಧ ಭವನ ಸೇರಿದಂತೆ ವಿವಿಧ ಕಟ್ಟಡ ಕಾಮಗಾರಿಗಳು ಮುಕ್ತಾಯವಾಗಿವೆ. ಇದಕ್ಕೆ ಅವಶ್ಯವಾದ ಯಂತ್ರೋಪಕರಣಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಗುತ್ತಿಗೆದಾರರಿಗೆ ವರ್ಷದ ಹಿಂದೆಯೇ ಸೂಚಿಸಲಾಗಿದೆ. ಶೌಚಾಲಯ, ಸ್ನಾನ ಗೃಹ, ಕಾಂಪೌಂಡ್ ಸೇರಿದಂತೆ ಅವಶ್ಯವಾದ ಕೆಲ ಸೌಕರ್ಯಗಳು ಹಂತ ಹಂತವಾಗಿ ನಿರ್ಮಾಣ ಆಗುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.