ADVERTISEMENT

ಮಹಾಕಾವ್ಯ ಇತರ ಸಾಹಿತ್ಯ ಪ್ರಕಾರಕ್ಕೆ ಪ್ರೇರಣೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 13:58 IST
Last Updated 11 ಅಕ್ಟೋಬರ್ 2019, 13:58 IST
ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಉದ್ಘಾಟಿಸಿದರು
ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಉದ್ಘಾಟಿಸಿದರು   

ಚನ್ನಪಟ್ಟಣ: ‘ಕನ್ನಡದ ಮಹಾಕಾವ್ಯಗಳು ಕಾವ್ಯ, ನಾಟಕ, ಪ್ರಬಂಧ, ಇನ್ನಿತರ ಎಲ್ಲ ಬಗೆಯ ಸಾಹಿತ್ಯ ಪ್ರಕಾರಗಳಿಗೆ ಪ್ರೇರಣೆಯಾಗಿವೆ’ ಎಂದು ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಸೃಜನ ಕನ್ನಡ ಸಾಹಿತ್ಯ ಸಂಘ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಾಕವಿಗಳಾದ ಪಂಪ ಮತ್ತು ಕುಮಾರವ್ಯಾಸರ ಕಾವ್ಯಗಳ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣದ ಉದ್ಘಾಟಿಸಿ ಅವರು ಮಾತನಾಡಿದರು.

‘ಪಂಪ, ಕುಮಾರವ್ಯಾಸ ಕವಿಗಳು ತಮ್ಮ ಕಾವ್ಯಗಳ ಮುಖೇನ ದೇಶ ಕಾಲಗಳನ್ನು ಮೀರಿದ ಭೂತ, ವರ್ತಮಾನ, ಭವಿಷ್ಯದ ಸಾರ್ವತ್ರಿಕ ಸತ್ಯವನ್ನು ಹೇಳಿದ್ದಾರೆ. ಈ ಇಬ್ಬರು ಮಹಾಕವಿಗಳು ವಿಕ್ರಮಾರ್ಜನ ವಿಜಯ, ಆದಿಪುರಾಣ, ಕರ್ಣಾಟಕ ಭಾರತ ಕಥಾಮಂಜರಿ ಕಾವ್ಯಗಳನ್ನು ಬರೆದಿದ್ದರೂ ಎರಡೂ ವಿಭಿನ್ನ ನೆಲೆಯಿಂದ ಕೂಡಿದವುಗಳಾಗಿವೆ. ಓದಲು, ಬರೆಯಲು ಬಾರದ ಜನಪದರು ಕೂಡ ಕುಮಾರವ್ಯಾಸ ಭಾರತವನ್ನು ಹಾಡುತ್ತಾ, ಅರ್ಥೈಸುವಷ್ಟು ಸರಳವಾಗಿದೆ’ ಎಂದರು.

ADVERTISEMENT

ಕವಿ ಎಲ್.ಎನ್.ಮುಕುಂದರಾಜ್ ಪಂಪನ ಕಾವ್ಯ ಕುರಿತು ಮಾತನಾಡಿ, ‘ಧರ್ಮರಾಯ, ಅರ್ಜುನ, ಕರ್ಣ, ಕುಂತಿ, ದುರ್ಯೋಧನ ಮುಂತಾದ ಪಾತ್ರಗಳ ಮುಖಾಂತರ ಹಲವಾರು ಸತ್ಯಗಳನ್ನು ಹೇಳಲಾಗಿದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ತೀಡಿ ಸಮಾಜವನ್ನು ಸರಿದಾರಿಗೆ ತರುವ ಜವಾಬ್ದಾರಿ ಸಾಹಿತಿಗಳದ್ದಾಗಿದೆ. ಹಾಗಾಗಿ ಜಾತಿ ವ್ಯವಸ್ಥೆ, ರಾಜಕಾರಣದ ಹತ್ತು ಹಲವು ಸತ್ಯದ ಕುರಿತು ಸಾಹಿತ್ಯ ರಚನೆಯಾಗಬೇಕಿದೆ’ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ವಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಕಾರ್ಯದರ್ಶಿ ಎಸ್.ಪಿ.ಮಹಾಲಿಂಗೇಶ್ವರ್ ಪ್ರಾಸ್ತಾವಿಕ ಮಾತನಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಮಧುಸೂಧನಾಚಾರ್ಯ ಜೋಷಿ, ಭಾರತ್ ವಿಕಾಸ್ ಪರಿಷತ್ ನ ಅಧ್ಯಕ್ಷ ವಸಂತಕುಮಾರ್, ಉಪನ್ಯಾಸಕರಾದ ಎಸ್.ರಾಮಲಿಂಗೇಶ್ವರ್, ಆಶಾ, ಪಾರ್ವತಿ ಕೆ.ಭಟ್, ಕನ್ನಡ ಪ್ರಾಧ್ಯಾಪಕರಾದ ಪ್ರೊ.ಆರ್.ಪದ್ಮನಾಭ, ಡಾ.ಮುರುಳಿ, ಡಾ.ಹುಲುವಾಡಿ ರವೀಂದ್ರ, ಡಾ.ರಮ್ಯ, ಪ್ರೊ.ರುಕ್ಮಿಣಿ, ಪ್ರೊ.ಕುಸುಮ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.