ADVERTISEMENT

ಅಡಿಕೆ ಬೆಲೆ ಕುಸಿತ: ಬೆಳೆಗಾರರ ಸಮಸ್ಯೆಗೆ ಮುಖ್ಯಮಂತ್ರಿ ಸ್ಪಂದನ.ನೂರು ಕೋಟಿ ಬಿಡುಗಡೆ ಭರವಸೆ.

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 8:50 IST
Last Updated 15 ಫೆಬ್ರುವರಿ 2011, 8:50 IST

ತೀರ್ಥಹಳ್ಳಿ: ಅಡಿಕೆ ಬೆಲೆ ಒಂದೇ ಸಮನೆ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ನೆರವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ` ನೂರು ಕೋಟಿ ಆವರ್ತ ನಿಧಿ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ತಾಲ್ಲೂಕು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಸೋಮವಾರ ಮುಖ್ಯಮಂತ್ರಿಯನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ನಿಯೋಗಕ್ಕೆ ನ್ಯಾಯಾಲಯಈ ಭರವಸೆ ನೀಡಿದ್ದು, ಕೆಂಪು ಅಡಿಕೆ ಕ್ವಿಂಟಲ್ ಒಂದಕ್ಕೆ `  12 ಸಾವಿರ ಹಾಗೂ ಚಾಲಿ ಅಡಿಕೆಗೆ ` 9 ಸಾವಿರಗಳಿಗೆ ಕಡಿಮೆಯಾಗದಂತೆ ನಿಗದಿಪಡಿಸಿ ಸಹಕಾರ ಸಂಸ್ಥೆಗಳ ಮೂಲಕ ಕೊಂಡುಕೊಳ್ಳಲು ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ, ಪ್ಲಾಸ್ಟಿಕ್ ಸ್ಯಾಚೆಟ್‌ಗಳಲ್ಲಿ ಅಡಿಕೆ ಮಾರಾಟ ನಿಷೇಧಿಸಲು ಆದೇಶ ಹೊರಡಿಸಿದ್ದು, ಗುಟ್ಕಾ ನಿಷೇಧದ ಪ್ರಸ್ತಾಪ ಇರುವುದರಿಂದ ನ್ಯಾಯಾಲಯದಲ್ಲಿ ಅಡಿಕೆ ಬೆಳೆಗಾರರ ಹಿತ ಕಾಯುವ ಸಲುವಾಗಿ ಸಮರ್ಥ ವಾದ ಮಂಡಿಸುವ ಸಲುವಾಗಿ ವಕೀಲರೊಬ್ಬರನ್ನು ನ್ಯಾಯಾಲಯದಲ್ಲಿ ಕಾನೂನು ಹೋರಾಟಕ್ಕೆ ವ್ಯವಸ್ಥೆ ಕಲ್ಪಿಸಲು ಯೋಚಿಸಲಾಗಿದೆ. ಈ ಸಂಬಂಧ ದೆಹಲಿಯಲ್ಲಿ ವಕೀಲರೊಬ್ಬರನ್ನು ನಿಯೋಜನೆಗೊಳಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾಗಿ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮುಖ್ಯಮಂತ್ರಿಯೊಂದಿಗೆ ರೈತರ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಲು ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದು ತಿಳಿಸಿದರು. ನಿಯೋಗದಲ್ಲಿ  ಸಂಸದ ಬಿ.ವೈ. ರಾಘವೇಂದ್ರ, ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ್, ಮ್ಯಾಮ್ಕೋಸ್ ಉಪಾಧ್ಯಕ್ಷ ಕೆ. ನರಸಿಂಹ ನಾಯಕ್, ತೀರ್ಥಹಳ್ಳಿ ಸಹ್ಯಾದ್ರಿ ಅಡಿಕೆ ಬೆಳೆಗಾರ ಹಾಗೂ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಚ್.ಎನ್. ವಿಜಯದೇವ್, ಶಿರಸಿ ತೋಟಗಾರ್ಸ್‌ ಸಂಸ್ಥೆ ಅಧ್ಯಕ್ಷ ಶಾಂತರಾಮ್ ಹೆಗಡೆ, ಶಿವಮೊಗ್ಗದ ಜ್ಯೊತಿ ಪ್ರಕಾಶ್, ಚನ್ನಗಿರಿ ತುಮ್‌ಕೋಸ್ ಅಧ್ಯಕ್ಷರು ಹಾಗೂ ಸದಸ್ಯರು, ಶಿವಮೊಗ್ಗ ಅಡಿಕೆ ವರ್ತಕರಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಮುಂತಾದವರಿದ್ದರು.

ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರೈತರ ಪರವಾಗಿ ಆರಗ ಜ್ಞಾನೇಂದ್ರ ಅಭಿನಂದನೆ ಸಲಿಸಿದ್ದಾರೆ.

ಅಡಿಕೆ ಮಾರದಂತೆ ಮನವಿ
ಅಡಿಕೆಗೆ ಬೆಲೆ ಇಳಿದ ಈ ದಿನಗಳಲ್ಲಿ ಬೆಳೆಗಾರರು ಕಡಿಮೆ ದರದಲ್ಲಿ ಅವಸರವಾಗಿ ಅಡಿಕೆಯನ್ನು ಮಾರಾಟ ಮಾಡುವ ನಿರ್ಧಾರ ಕೈಗೊಳ್ಳಬಾರದು ಎಂದು ತೀರ್ಥಹಳ್ಳಿ ಎಪಿಎಂಸಿ ಅಧ್ಯಕ್ಷ ಸಿ.ಬಿ. ಈಶ್ವರ್ ತಿಳಿಸಿದ್ದಾರೆ.ಈ ಸಾಲಿನಲ್ಲಿ ಮಲೆನಾಡಿನಲ್ಲಿ ಅಡಿಕೆ ಬೆಳೆ ಕಡಿಮೆ ಇದ್ದು, ಎಪಿಎಂಸಿಯಲ್ಲಿ ದಾಸ್ತಾನು ಕೂಡಾ ಕಡಿಮೆ ಇದೆ. ತೀರ್ಥಹಳ್ಳಿಯ ದೇಶಾವಾರು ಸರಕು ಗುಟ್ಕಾ ಉತ್ಪಾದನೆಗೆ ಹೋಗುವುದಿಲ್ಲ. ಇದರ ಮಾರುಕಟ್ಟೆಯೇ ಬೇರೆ. ಆದರೂ, ಸರಕಿನ ಧಾರಣೆ ಗಣನೀಯವಾಗಿ ಇಳಿದಿದೆ. ಇದರಲ್ಲಿ ಖರೀದಿದಾರರ ಕೈವಾಡ ಇದೆ ಅನಿಸುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.