ಶಿವಮೊಗ್ಗ: ನೂರಾರು ಕುಟುಂಬ ಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಕರ್ತರು ಭಾನುವಾರ ಪಶ್ಚಿಮಫಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರಿಗೆ ಘೇರಾವ್ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಸಾಗರ ತಾಲ್ಲೂಕಿನ ತುಮರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಡನಹಳ್ಳಿ, ಅಡಗಳಲೆ ಹಾಗೂ ಮರಾಠಿ ಗ್ರಾಮದ 3,857 ಎಕರೆ ಪ್ರದೇಶವನ್ನು `ಜೀವ ವೈವಿಧ್ಯ ತಾಣ~ ಎಂದು ಘೋಷಣೆ ಮಾಡುವ ಮೂಲಕ ಸರ್ಕಾರ ಅಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ಅದಕ್ಕೆ ಅನಂತ ಹೆಗಡೆ ಅಶೀಸರ ಅವರ ಶಿಫಾರಸು ಕಾರಣ ಎಂದು ಆರೋಪಿಸಿದರು.
ಆ ಗ್ರಾಮದ ಸಾವಿರಾರು ಎಕರೆ ಪ್ರದೇಶದಲ್ಲಿ ನೂರಾರು ಮಂದಿ ನೆಲೆಸಿದ್ದಾರೆ. ಸರ್ಕಾರದ ಕ್ರಮದಿಂದ ಅನೇಕ ಕುಟುಂಬಗಳು ಬೀದಿಗೆ ಬರಲಿವೆ. ಅನೇಕ ಸಾಗುವಳಿದಾರರು, ಬಗರ್ಹುಕುಂ ಸಾಗುವಳಿದಾರರು ಹಾಗೂ ಅರಣ್ಯ ಭೂಮಿ ಒತ್ತುವರಿ ಮಾಡಿದವರೂ ಇದ್ದಾರೆ. ಅರಣ್ಯ ಭೂಮಿಯ ಹಕ್ಕಿನ ನಿರೀಕ್ಷೆಯಲ್ಲಿ ಅನೇಕ ಕುಟುಂಬಗಳು ಇವೆ. ಆದರೆ, ಸರ್ಕಾರದ ನಿರ್ಧಾರದಿಂದ ಅನೇಕ ಕುಟುಂಬಗಳಿಗೆ ತೊಂದರೆ ಆಗುತ್ತಿದ್ದು, ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿದರು.
ಶರಾವತಿ, ವಾರಾಹಿ ಹಾಗೂ ಸಾವೇಹಕ್ಲು ಮುಳುಗಡೆ ಪ್ರದೇಶದ ನಿರಾಶ್ರಿತರಿಗೆ ಸರ್ಕಾರ ಈ ಹಿಂದೆ ಅರಣ್ಯಭೂಮಿ ಮಂಜೂರು ಮಾಡಿತ್ತು. ಆ ಜಮೀನುಗಳಿಗೆ ಸಾಗುವಳಿ ಚೀಟಿ ಸಹ ಇದೆ. ಆದರೆ, ಈಗ ರೈತರ ಖಾತೆ ಜಮೀನುಗಳನ್ನು ಕಂದಾಯ ದಾಖಲೆಗಳಲ್ಲಿ ನಿಯಮಬಾಹಿರವಾಗಿ ಅರಣ್ಯಭೂಮಿ ಎಂದು `ಇಂಡೀಕರಣ~ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ದೇವೇಂದ್ರಪ್ಪ, ಮಧುಸೂದನ್, ಚೇತನ್ ವಹಿಸಿದ್ದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.