ಶಿವಮೊಗ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಹಲವು ವರ್ಷಗಳ ಹಿಂದೆ ನಾಪತ್ತೆಯಾದ ಆನೆ ದಂತ ಪ್ರಕರಣದ ತನಿಖೆ ನಡೆಸುವಂತೆ ಕೋರಿ ಜಿಲ್ಲಾ ಪೊಲೀಸರು ಇಲಾಖೆಯ ಉನ್ನತಾಧಿಕಾರಿಗಳ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಅರಣ್ಯ ಇಲಾಖೆ 2 ದಶಕಗಳ ಹಿಂದೆ ಈ ಆನೆ ದಂತ ನೀಡಿತ್ತು. ಅವುಗಳನ್ನು ಎಸ್ಪಿ ಕುರ್ಚಿಯ ಹಿಂದಿನ ಗೋಡೆಗೆ ಹಾಕಲಾಗಿತ್ತು.
ಅಧಿಕಾರಿಗಳು ವರ್ಗಾವಣೆಯಾದಂತೆ ಕಚೇರಿ ನವೀಕರಣಕ್ಕಾಗಿ ದಂತವನ್ನು ತೆಗೆದು ಇಡಲಾಗುತ್ತಿತ್ತು. ಕೆಲವು ವರ್ಷಗಳಿಂದ ಅದು ಗೋಡೆಯಿಂದ ಶಾಶ್ವತವಾಗಿ ಮರೆಯಾಗಿತ್ತು.
ಎಸ್ಪಿ ಅಭಿನವ್ ಖರೆ ಈಚೆಗೆ ಕಚೇರಿ ಆವರಣದಲ್ಲಿದ್ದ ಶಿಲ್ಪ ಕಲಾಕೃತಿಗಳನ್ನು ಕುವೆಂಪು ವಿವಿಗೆ ಹಸ್ತಾಂತರಿಸಿದ ನಂತರ ಆನೆ ದಂತದ ವಿಷಯವೂ ಪ್ರಾಮುಖ್ಯತೆ ಪಡೆಯಿತು. ಈ ಕುರಿತು ಹೆಚ್ಚುವರಿ ಎಸ್ಪಿ ನೇತೃತ್ವದ ತಂಡ ತನಿಖೆ ನಡೆಸಿದರೂ ದಂತ ಮಾತ್ರ ಪತ್ತೆಯಾಗಲಿಲ್ಲ.
ಹಿಂದೆ ಎಸ್ಪಿಗಳಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದವರು ಈಗ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಅವರನ್ನೆಲ್ಲ ಕರೆದು ವಿಚಾರಣೆ ಮಾಡಬೇಕಿರುವ ಕಾರಣ ಉನ್ನತಾಧಿಕಾರಿಗಳಿಂದಲೇ ತನಿಖೆ ನಡೆಸುವಂತೆ ಕೋರಿ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.