ADVERTISEMENT

ಉಪವಾಸ ಸತ್ಯಾಗ್ರಹದಲ್ಲಿ ಶಾಸಕ ಕಿಮ್ಮನೆ ರತ್ನಾಕರ ಆರೋಪ.ಕಾರ್ಮಿಕರ ಸ್ಥಿತಿಗೆ ಜ್ಞಾನೇಂದ್ರ ಹೊಣೆ.

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 9:20 IST
Last Updated 16 ಫೆಬ್ರುವರಿ 2011, 9:20 IST

ಭದ್ರಾವತಿ: ‘ಕಾರ್ಖಾನೆ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರ ಆಡಳಿತ ವೈಫಲ್ಯ ಕಾರಣ ಕಾರ್ಮಿಕರು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ ಗಂಭಿರ ಆರೋಪ ಮಾಡಿದರು. ಇಲ್ಲಿನ ಎಂಪಿಎಂ ಕಾರ್ಖಾನೆ ಕಾರ್ಮಿಕ ಸಂಘ ತುಟ್ಟಿಭತ್ಯೆ ನೀಡುವಂತೆ ಆಗ್ರಹಿಸಿ ಕಳೆದ ಆರು ದಿನದಿಂದ ನಡೆಸುತ್ತಿರುವ ಸರದಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು ಕಾರ್ಮಿಕರ ಸಭೆ ಉದ್ದೇಶಿಸಿ ಮಾತನಾಡಿದರು.

ಆಡಳಿತ ನಡೆಸುವ ಜವಾಬ್ದಾರಿ ಅರಿಯದ ಹಾಗೂ ಶಾಸನಸಭೆ ತಿಳಿವಳಿಕೆ ತಿಳಿಯದ ವ್ಯಕ್ತಿ ಕೈಯಲ್ಲಿ ಕಾರ್ಖಾನೆ ಆಡಳಿತ ಸಿಕ್ಕಿರುವುದು ವಿಪರ್ಯಾಸ ದುರದೃಷ್ಟಕರ ಎಂದು ಜ್ಞಾನೇಂದ್ರ ಅವರನ್ನು ಟೀಕಿಸಿದರು. ಮುಖ್ಯಮಂತ್ರಿ ಈಚೆಗೆ ಜಿಲ್ಲೆಯ ಅಭಿವೃದ್ಧಿ ಕುರಿತು ಕೆರೆದಿದ್ದ ಸಭೆಯಲ್ಲಿ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಪ್ರಸ್ತಾವವನ್ನುಇಲ್ಲಿನ ಕಾರ್ಮಿಕ ಮುಖಂಡರೇ ನೀಡಿದ್ದಾರೆಎಂಬ ವಿಚಾರವನ್ನು ಕಿಮ್ಮನೆ ಸಭೆಗೆ ತಿಳಿಸಿದರು.

ಸರ್ಕಾರದ ಮಟ್ಟದಲ್ಲಿ ಕಾರ್ಖಾನೆ ಕಾರ್ಮಿಕರು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂಬ ಆರೋಪವನ್ನು ಜ್ಞಾನೇಂದ್ರ ಮಾಡಿದ್ದಾರೆ. ಈ ಕುರಿತಾದ ಸ್ಪಷ್ಟ ಮಾಹಿತಿ ನನಗೆ ಕೊಡಿ. ಮುಖ್ಯಮಂತ್ರಿಗೆ ಇದರ ಕುರಿತು ಲಿಖಿತ ಸ್ಟಷ್ಟನೆ ನೀಡುತ್ತೇನೆ ಎಂದರು.ಕಾರ್ಮಿಕರಿಗೆ ಸರಿಯಾಗಿ ದೊರೆಯಬೇಕಾದ ತುಟ್ಟಿಭತ್ಯೆ ದೊರೆಯಲೇಬೇಕು. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕಾಗಿ ನಾನು ನಿಮ್ಮೊಂದಿಗೆ ಹೋರಾಟ ಮಾಡಲು ಸಿದ್ಧ ಹಾಗೂ ಶಾಸನಸಭೆಯಲ್ಲಿ ಈ ವಿಚಾರದ ಪ್ರಸ್ತಾವ ಮಾಡುತ್ತೇನೆ ಎಂದು ಘೋಷಿಸಿದರು.

ಅಧ್ಯಕ್ಷರು ಐದಾರು ಎಕರೆ ಸರ್ಕಾರಿ ಜಮೀನು ಸಾಗು ಮಾಡಿದ್ದಾರೆ. ಕೇಳಿದರೆ ಬಗರ್‌ಹುಕುಂ ಸಾಗುವಳಿ ಎನ್ನುತ್ತಾರೆ. ಅವರು ಶಾಸಕರಿದ್ದ ಸಂದರ್ಭದಲ್ಲಿ ಎಂಪಿಎಂ ಅರಣ್ಯ ಇಲಾಖೆ ವಾಹನ ಮಳೆಗಾಲದಲ್ಲಿ ಓಡಾಡಿದರೆ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಬೈಯುತ್ತಿದ್ದರು. ಈಗ ಅವರು ಇದರ ಕುರಿತು ಮೌನವಹಿಸಿದ್ದಾರೆ ಎಂದು ಜ್ಞಾನೇಂದ್ರ ಅವರನ್ನು ಟೀಕಿಸಿದರು.
ಸಭೆಯಲ್ಲಿ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಬಿ.ಜೆ. ಸದಾಶಿವಲಿಂಗೇಗೌಡ, ಹಾಲಪ್ಪ, ಶಿವಮೂರ್ತಿ, ತೀರ್ಥಪ್ಪ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.