ADVERTISEMENT

ಕಳಪೆ ಕಾಮಗಾರಿ: ಶಾಸಕರ ತರಾಟೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 5:27 IST
Last Updated 26 ಡಿಸೆಂಬರ್ 2012, 5:27 IST

ಹೊಸನಗರ: ತಾಲ್ಲೂಕಿನ ಮೂಡುಗೊಪ್ಪ ನಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಡಿಗ್ಗೇರಿ ಎಂಬಲ್ಲಿ ಕಳಪೆ ಕಾಮಗಾರಿ ಕುರಿತಂತೆ ಸೋಮವಾರ ಗ್ರಾಮಸ್ಥರ ಪ್ರತಿಭಟನೆಯ ಮೇರೆಗೆ ಸ್ಥಳಕ್ಕೆ ಆಗಮಿಸಿದ ಶಾಸಕ ಕಿಮ್ಮನೆ ರತ್ನಾಕರ್ ಅಧಿಕಾರಿ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ನಗರ-ಕಾಡಿಗ್ಗೇರಿ-ಕಾನುಗೋಡು ಮೂಲಕ ಮಾಸ್ತಿಕಟ್ಟೆ ಸಂಪರ್ಕ ಮಾರ್ಗದ ಕಾಮಗಾರಿ ಅಂದಾಜು ಪಟ್ಟಿಗೂ ಹಾಗೂ ನಡೆದ ಕಾಮಗಾರಿಗೂ ಅಜಗಜಾಂತರ ವ್ಯತ್ಯಾಸ ಇದೆ. ಗುಣಮಟ್ಟದ `ಗ್ರಾವೆಲ್' ಹಾಕಿಲ್ಲ. ಡಾಂಬರೀಕರಣಕ್ಕೆ ಕಡಿಮೆ ಹಣ ಮೀಸಲಿಟ್ಟು ಮಣ್ಣಿನ ಕೆಲಸಕ್ಕೆ ಹೆಚ್ಚು ಹಣ ಇಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು, ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಸುದ್ದಿ ತಿಳಿದ ಶಾಸಕ ಕಿಮ್ಮನೆ ರತ್ನಾಕರ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕರರ ದೂರನ್ನು ಆಲಿಸಿದರು. ಕಾಮಗಾರಿ ವೀಕ್ಷಿಸಿದರು. ಕೂಡಲೇ ಸಂಬಂಧಪಟ್ಟ ಎಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ದೂರವಾಣಿಯ ಮೂಲಕ ತರಾಟೆಗೆ  ತೆಗೆದುಕೊಂಡು ಕಾಮಗಾರಿ ಸಮರ್ಪಕವಾಗಿ ಮಾಡುವಂತೆ ತಾಕೀತು ಮಾಡಿದರು.

ಪ್ರತಿಭಟನೆಯಲ್ಲಿ ಕಾಡಿಗ್ಗೇರಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ವಡ್ಡಿನಬೈಲ್ ಸುಬ್ರಹ್ಮಣ್ಯ, ಗ್ರಾಮ ಪಂಚಾಯ್ತಿ ಸದಸ್ಯ ಆದಿರಾಜ್, ಗ್ರಾಮದ ಪ್ರಮುಖರಾದ ಕರುಣಾಕರ ಶೆಟ್ಟಿ, ಶ್ರೀಕಾಂತ್, ಗೋಪಾಲ ಶೆಟ್ಟಿ, ತೋಟಪ್ಪ ಗೌಡ, ಬೈಸೆ ರವಿ, ಅಂತೋಣಿ ಸಿಕ್ವೇರಾ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.