ADVERTISEMENT

ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 6:20 IST
Last Updated 19 ಫೆಬ್ರುವರಿ 2012, 6:20 IST

ಸಾಗರ: ಸೇವೆಯೇ ಪ್ರಮುಖ ಧ್ಯೇಯವಾಗಿರುವ ಸಹಕಾರಿ ಕ್ಷೇತ್ರದ ಮೇಲೆ ತೆರಿಗೆ ಹೇರುವ ಮೂಲಕ ಆ ಕ್ಷೇತ್ರವನ್ನು ನಿಯಂತ್ರಿಸಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ ಎಂದು ಗಣಪತಿ ಅರ್ಬನ್ ಕೋ-ಆಪರೇಟೀವ್ ಬ್ಯಾಂಕ್ ಅಧ್ಯಕ್ಷ ಎಸ್. ಗಜಾನನ ಜೋಯಿಸ್ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಗಣಪತಿ ಅರ್ಬನ್ ಕೋ-ಆಪರೇಟೀವ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತರ ರಾಷ್ಟ್ರೀಯ ಸಹಕಾರ ವರ್ಷದ ಅಂಗವಾಗಿ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರಿಗೆ ಹಾಗೂ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಶನಿವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ ರಂಗದಿಂದ ಸಮಾಜದ ವಿವಿಧ ಇತರ ಕ್ಷೇತ್ರಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತಿದೆ. ಲಾಭ ಗಳಿಕೆಯೆ ಸಹಕಾರಿ ಕ್ಷೇತ್ರದ ಉದ್ದೇಶವಾಗಿದ್ದರೆ ಈ ಕ್ಷೇತ್ರದಲ್ಲಿರುವ ಅನೇಕ ಸಂಸ್ಥೆಗಳು ಆರ್ಥಿಕವಾಗಿ ಮತ್ತಷ್ಟು ಸದೃಢವಾಗಿರುತ್ತಿತ್ತು. ಆದರೆ, ಬಡ ಹಾಗೂ ಮಧ್ಯಮ ವರ್ಗಕ್ಕೆ ನೆರವಾಗಬೇಕು ಎಂಬ ಮನೋಭಾವದಿಂದ ಸಹಕಾರಿ ಸಂಸ್ಥೆಗಳು ಕೆಲಸ ಮಾಡುತ್ತಿರುವ ಅಂಶಗಳನ್ನು ಸರ್ಕಾರ ಪರಿಗಣಿಸಬೇಕು ಎಂದರು.

ಕೃಷಿ ಕ್ಷೇತ್ರಕ್ಕೆ ಸಹಕಾರಿ ಕ್ಷೇತ್ರಕ್ಕೆ ಆಗುತ್ತಿರುವ ಪ್ರಯೋಜನವನ್ನು ಯಾರೂ ಮರೆಯುವಂತಿಲ್ಲ. ಈ ಮೂಲಕ ಗ್ರಾಮೀಣಾಭಿವೃದ್ಧಿಗೆ ಸಹಕಾರಿ ಸಂಸ್ಥೆಗಳು ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಮಾತನಾಡಿ, ಸಹಕಾರಿ ಕ್ಷೇತ್ರ ಪ್ರಸ್ತುತ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿ ಸಂಸ್ಥೆಗಳು ಸಂಘಟಿತರಾಗಿ ಪ್ರಯತ್ನ ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟರು.

`ಸಹಕಾರಿ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆ~ ಕುರಿತು ಜಿ.ಆರ್. ವೆಂಕಟೇಶ್, `ಸಹಕಾರಿಗಳ ವ್ಯಕ್ತಿತ್ವ ವಿಕಸನ~ ಕುರಿತು ಬಿ.ಎ. ಮಹಾದೇವಪ್ಪ, `ನೇರ ತೆರಿಗೆ ಸಂಹಿತೆ~ ಕುರಿತು ಬಿ.ವಿ. ರವೀಂದ್ರನಾಥ್ ಉಪನ್ಯಾಸ ನೀಡಿದರು.

ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಕೆ.ಆರ್.ಗಣಪತಿ, ನಿರ್ದೇಶಕ ಬಿ.ಜಿ .ದಿನೇಶ್ ಬರದವಳ್ಳಿ, ಗಣಪತಿ ಬ್ಯಾಂಕ್ ಉಪಾಧ್ಯಕ್ಷ ವಿ.ಗುರು ಹಾಜರಿದ್ದರು. ಕೆ.ವಿ. ಸುಧಾ ಪ್ರಾರ್ಥಿಸಿದರು.
ಉದಯ ಕಾಮತ್ ಸ್ವಾಗತಿಸಿದರು. ಎಚ್.ಕೆ. ಚಂದ್ರಶೇಖರ್ ವಂದಿಸಿದರು. ಟಿ.ಆರ್. ಆನಂದರಾವ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.