ADVERTISEMENT

ಕ್ರೈಸ್ತರ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

ಪಾಕಿಸ್ತಾನದಲ್ಲಿ ಈಚೆಗೆ ಚರ್ಚ್‌ ಮೇಲೆ ದಾಳಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 6:45 IST
Last Updated 26 ಸೆಪ್ಟೆಂಬರ್ 2013, 6:45 IST

ಶಿವಮೊಗ್ಗ: ಪಾಕಿಸ್ತಾನದ ಪೇಶಾವರ ನಗರದಲ್ಲಿ ಈಚೆಗೆ ನಡೆದ ಚರ್ಚ್‌ ಮೇಲಿನ ದಾಳಿ ಖಂಡಿಸಿ ಶಿವಮೊಗ್ಗ ಕ್ರೈಸ್ತ ಸಮುದಾಯದ ಪ್ರಮುಖರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರಿಗೆ ಮನವಿ ಸಲ್ಲಿಸಿದರು.

ಪೇಶಾವರ ಕ್ರೈಸ್ತರ ದೇವಾಲಯದಲ್ಲಿ ಸೇರಿದ್ದ ಸಮುದಾಯದವರ ಮೇಲೆ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಿಂದ ಸುಮಾರು 80 ಮಂದಿ ಕ್ರೈಸ್ತರು ಸಾವನ್ನಪ್ಪಿದ್ದು, 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಂತಹ ದಾಳಿ ಭಯೋತ್ಪಾದಕರ ಹೇಡಿತನದ ಪರಮಾವಧಿ ಯಾಗಿದ್ದು, ಆತ್ಮಾಹುತಿ ಕೃತ್ಯ ನಡೆಸಿದವರನ್ನು ಪಾಕಿಸ್ತಾನ ಸರ್ಕಾರ ಕೂಡಲೇ ಬಂಧಿಸಬೇಕು. ಅವರಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಕ್ರೈಸ್ತ ಧರ್ಮ ವಿಶ್ವದಲ್ಲಿ ಶಾಂತಿ ಬಯಸುವ ಧರ್ಮ; ಇದು ಸಮಾಜದಲ್ಲಿ ಸೇವೆ ಮಾಡುತ್ತಾ ವಿವಿಧ ಕ್ಷೇತ್ರಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಆದರೆ, ಈ ದಾಳಿಯೂ ಕ್ರೈಸ್ತ ಬಾಂಧವರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದಾಳಿಯಿಂದ ಸಾಕಷ್ಟು ಕ್ರೈಸ್ತ ಬಾಂಧವರು ನಿರಾಶ್ರಿತರಾಗುವ ಆತಂಕದಲ್ಲಿ ಜೀವನ ಸಾಗಿ ಸುತ್ತಿದ್ದಾರೆ. ದಾಳಿಯಿಂದ ಪ್ರಾಣಹಾನಿಯಾಗಿದೆ, ಸಾಕಷ್ಟು ಆಸ್ತಿ-ಪಾಸ್ತಿಗಳೂ ಹಾನಿಗೆ ತುತ್ತಾಗಿವೆ. ಸರ್ಕಾರ ಕೂಡಲೇ ಆಗಿರುವ ನಷ್ಟಕ್ಕೆ ಪರಿಹಾರವನ್ನು ಭರಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಪಾಕಿಸ್ತಾನ ಸರ್ಕಾರ ಎಚ್ಚರವಹಿಸಿ, ಕ್ರೈಸ್ತರಿಗೆ ಸೂಕ್ತ ರಕ್ಷಣೆಯ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸೆರ್ಕೆಡ್‌ ಹಾರ್ಟ್‌ ಚರ್ಚ್‌ನ ಫಾದರ್ ಯೇಸು ರಕ್ಷಕನಾದನ್, ವಿನ್ಸೆಂಟ್, ಜೈರಾಜ್, ಮರಿಯಪ್ಪ, ಫೆಲೋಮಿನಾ ಪಿಂಟೋ, ಲೀಲಾ, ಮರಿಯಾ, ತೆರೇಸಮ್ಮ, ಮಾರ್ಗರೇಟ್, ಎಲಿಜೆಬೆತ್ ಮತ್ತಿತರರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.