ADVERTISEMENT

ಗ್ರಾಮಾಭಿವೃದ್ಧಿಗೆ ಎತ್ತಿನಗಾಡಿ ಯಾತ್ರೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 7:05 IST
Last Updated 13 ಜನವರಿ 2011, 7:05 IST

ಶಿವಮೊಗ್ಗ: ಸಾಗರ ವಿಧಾನಸಭಾ ಕ್ಷೇತ್ರಾಭಿವೃದ್ಧಿ ಹೋರಾಟ ಸಮಿತಿ, ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ ಗ್ರಾಮಾಭಿವೃದ್ಧಿಗಾಗಿ ಜನ ಜಾಗೃತಿಯ ಎತ್ತಿನಗಾಡಿ ಯಾತ್ರೆಯನ್ನು ಜ. 17ರಿಂದ 22ರವರೆಗೆ ಹಮ್ಮಿಕೊಂಡಿದೆ ಎಂದು ಜಿ.ಪಂ. ಮಾಜಿ ಸದಸ್ಯ ಕೆ. ಅರುಣ್‌ಪ್ರಸಾದ್ ತಿಳಿಸಿದರು.

ಗ್ರಾಮಗಳ ಅಭಿವೃದ್ಧಿಗೆ ಬರುವ ಹಣದ ವಿನಿಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಎತ್ತಿನಗಾಡಿ ಯಾತ್ರೆ ಏರ್ಪಡಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

17ರಂದು ಬೆಳಿಗ್ಗೆ ಆನಂದಪುರಂನ ಮುರುಘ ರಾಜೇಂದ್ರಸ್ವಾಮಿ ಮಠದಿಂದ ಆರಂಭವಾಗುವ ಯಾತ್ರೆಯನ್ನು ಕಾಗೋಡು ಸತ್ಯಾಗ್ರಹದ ನೇತಾರ ಎಚ್. ಗಣಪತಿಯಪ್ಪ ಉದ್ಘಾಟಿಸುವರು. 17ರಂದು ಆಚಾರಪುರ, ಯಡೇಹಳ್ಳಿ, ಆನಂದಪುರಂ, ಗೌತಮಪುರ, ತ್ಯಾಗರ್ತಿ, ಹಿರೇಬಿಲಗುಂಜಿ, ವೀರಾಮಠ ಮಠದಲ್ಲಿ ವಾಸ್ತವ್ಯ ಮಾಡಲಾಗುವುದು ಎಂದರು.

18ರಂದು ಅಡ್ಡೇರಿ, ಕಾಸ್ಪಾಡಿ, ಉಳ್ಳೂರು, ಸಾಗರ ಪೇಟೆ, ಯಡ ಜಿಗಳೆಮನೆ, ವರದಳ್ಳಿ ಶ್ರೀಧರಾಶ್ರಮದಲ್ಲಿ ವಾಸ್ತವ್ಯ. 19ರಂದು ಆವಿನಹಳ್ಳಿ, ಹುಲಿದೇವರ ಬನ, ಹೊಳೆಬಾಗಿಲು, ಸಿಗಂದೂರು ದೇವಾಲಯದಲ್ಲಿ ವಾಸ್ತವ್ಯ. 20ರಂದು ತುಮರಿ, ಬ್ಯಾಕೋಡು, ಕಬ್ಬದೂರು, ಹರೇಕೃಷ್ಣ ಆಶ್ರಮದಲ್ಲಿ ವಾಸ್ತವ್ಯ. 21ರಂದು ನಿಟ್ಟೂರು, ಸಂಪೆಕಟ್ಟೆ, ನಗರ, ಕಾರಣಗಿರಿ, ಜಯ ನಗರ, ರಾಮಚಂದ್ರಪುರದ ಮಠದಲ್ಲಿ ವಾಸ್ತವ್ಯ ಹೂಡಲಾಗುವುದು ಎಂದರು.

22ರಂದು ಹೊಸನಗರ, ಕೋಡೂರು, ಜೇನಿ ಹಾಗೂ ರಿಪ್ಪನ್ ಪೇಟೆಯಲ್ಲಿ ಅಂತಿಮ ಗೊಳ್ಳುವುದು ಎಂದು ಹೇಳಿದರು.ಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರಾದ ಭೀಮನೇರಿ ಶಿವಪ್ಪ, ತೀ.ನಾ. ಶ್ರೀನಿವಾಸ್, ಹೋರಾಟಗಾರ ಟಿ.ಆರ್. ಕೃಷ್ಣಪ್ಪ, ಬಿ.ಪಿ. ರಾಮಚಂದ್ರ ಮತ್ತಿತರರು ಪಾಲ್ಗೊಳ್ಳುವರು ಎಂದರು.

ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಯಾಗಿ ಈ ವೇದಿಕೆ ರೂಪುಗೊಂಡಿದೆ. ಕಾಂಗ್ರೆಸ್‌ನಲ್ಲಿ ತೀ.ನಾ. ಶ್ರೀನಿವಾಸ್ ಅವರಂತಹ ಹೋರಾಟಗಾರರಿಗೆ ಬೆಲೆ ಇಲ್ಲ. ಕಾಗೋಡು ತಿಮ್ಮಪ್ಪ ಸ್ವಜಾತಿ ಯವರಿಗೆ ಮಣೆ ಹಾಕುತ್ತಿದ್ದಾರೆ. ಹಿಂದೆ ಪರಸ್ಪರ ಟೀಕಿಸಿಕೊಳ್ಳುತ್ತಿದ್ದ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಈಗ ಒಂದಾಗಿದ್ದಾರೆ. ಇದ್ಯಾವ ರಾಜಕೀಯ ಎಂದು ಪ್ರಶ್ನಿಸಿದರು.ಮುಂಬರುವ ಸಾಗರದ ಚುನಾವಣೆಗೆ ಇದು ಸಿದ್ಧತೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ, ‘ಯಾಕಾಗಬಾರದು’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.