ADVERTISEMENT

‘ಚಿಕಿತ್ಸೆಯಿಂದ ಜಾನುವಾರಿಗೆ ಉತ್ಪಾದಕತೆ’

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 9:40 IST
Last Updated 13 ಅಕ್ಟೋಬರ್ 2017, 9:40 IST

ಸಾಗರ: ಅನುತ್ಪಾದಕ ಎಂದು ಪರಿಗಣಿಸಿರುವ ಜಾನುವಾರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಅವುಗಳನ್ನು ಉತ್ಪಾದಕತೆಯತ್ತ ಕೊಂಡೊಯ್ಯಬಹುದು. ಅವು ನಿರುಪಯುಕ್ತ ಎಂಬ ಭಾವನೆ ಬೇಡ ಎಂದು ಶಿವಮೊಗ್ಗದ ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎನ್‌.ಶ್ರೀಧರ್‌ ಹೇಳಿದರು.

ತಾಲ್ಲೂಕಿನ ಆವಿನಹಳ್ಳಿ ಗ್ರಾಮದಲ್ಲಿ ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಾನುವಾರು ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಈಚೆಗೆ ನಡೆದ ಜಾನುವಾರು ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 115 ಜಾನುವಾರನ್ನು ಪರಿಶೀಲಿಸಿ, ಅವುಗಳಲ್ಲಿ ಅನುತ್ಪಾದಕ ಎಂದು ಪರಿಗಣಿಸಲಾಗಿದ್ದ 54 ಜಾನುವಾರಿಗೆ ಚಿಕಿತ್ಸೆ ನೀಡಿ ಉತ್ಪಾದಕತೆಯತ್ತ ಕೊಂಡೊಯ್ಯಲಾಗಿದೆ. ಇತರ ಜಾನುವಾರುಗಳಲ್ಲಿರುವ ನಿಗೂಢ ಕಾಯಿಲೆಗಳನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ಈವರೆಗೆ ಉಪ್ಪಳ್ಳಿ, ಆವಿನಹಳ್ಳಿ, ಗೆಣಸಿನಕುಣಿ, ಸಿಗಂದೂರು, ಸೈದೂರು, ತಲವಾಟ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಇತರ ಭಾಗಗಳಲ್ಲೂ ತಪಾಸಣಾ ಶಿಬಿರ ನಡೆಸಲಾಗುವುದು ಎಂದು ಹೇಳಿದರು.

ಡಾ.ಎ.ಮರುಗೇಂದ್ರಪ್ಪ ಮಾತನಾಡಿ, ‘ಹೈನುಗಾರಿಕೆಯಲ್ಲಿ ತೊಡಗಿರುವವರು ತಮ್ಮ ಜಾನುವಾರು ಆರೋಗ್ಯದ ಬಗ್ಗೆ ಸೂಕ್ತ ಮಾಹಿತಿ ಹೊಂದಿರಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಜಾಗೃತಿ ವಹಿಸಬೇಕು’ ಎಂದರು.

ಡಾ.ಮಹಾದೇವ ಶರ್ಮ, ಡಾ.ತಿಮ್ಮಪ್ಪ, ಡಾ.ದಯಾನಂದ್, ಡಾ.ಶ್ರೀಪಾದ್‌, ಸುದೇಶಿ, ಕೆರೆಯಪ್ಪ, ಸೋಮಶೇಖರ್, ಕ್ಷೇತ್ರ ಸಂಶೋಧಕ ರಾಘವೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.