ADVERTISEMENT

ಜಿಲ್ಲಾವಾರು ಪ್ರಾಧಿಕಾರ ರಚಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 10:20 IST
Last Updated 11 ಫೆಬ್ರುವರಿ 2012, 10:20 IST

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹಾಗೂ ಚಿಕ್ಕಮಗಳೂರು, ದಕ್ಷಿಣ ಕನ್ನಡ ವ್ಯಾಪ್ತಿಯಲ್ಲಿ ಸರ್ಕಾರ ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಬದಲು ಜಿಲ್ಲಾವಾರು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಹಾಗೂ ಕೃಷಿ ವಿಶ್ವವಿದ್ಯಾಲಯ ಹಾಗೂ ಕುವೆಂಪು ವಿವಿಗಳನ್ನು ಇದರ ವ್ಯಾಪ್ತಿಯಿಂದ ಹೊರಗಿಡುವಂತೆ ನಗರ ಜೆಡಿಎಸ್ ಮುಖ್ಯಮಂತ್ರಿಗೆ ಒತ್ತಾಯಿಸಿದೆ.

ಸರ್ಕಾರ ರಚಿಸಿರುವ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ, ಈ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಐದು ಲಕ್ಷ ರೂಪಾಯಿ ಅನುದಾನ ನೀಡದಂತಹ ಹಂತ ತಲುಪಿದೆ. ಅಲ್ಲದೇ, ಇಲ್ಲಿನ ಅಧಿಕಾರಿಗಳು ಸಹ ಕೆಲಸವಿಲ್ಲದೇ ಕಾಲ ಕಳೆಯುತ್ತಿದ್ದಾರೆ. ಮತ್ತು ಈ ಭಾಗದ ಕೋಟೆಗಳು ಸ್ಮಾರಕಗಳ ಸಂರಕ್ಷಣೆಗಾಗಿ ಪ್ರಾಚ್ಯವಸ್ತು ಇಲಾಖೆಗಳಿವೆ. ದೇವಾಲಯ ನಿರ್ಮಿಸಲು ಧಾರ್ಮಿಕ ದತ್ತಿ ಇಲಾಖೆಗಳಿವೆ. ಈಗಿರುವಾಗ `ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ~ದ ಆವಶ್ಯಕತೆ ಇಲ್ಲ.

ಅಷ್ಟೇ ಅಲ್ಲದೇ, ಈ ಯೋಜನೆಯಲ್ಲಿ ಕೃಷಿ ಮತ್ತು ಕುವೆಂಪು ವಿ.ವಿ.ಗಳನ್ನು ಸೇರಿಸುವ ಅಗತ್ಯವಾದರೂ ಇಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಸಹ್ಯಾದ್ರಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ರಚನೆ ನಿರ್ಧಾರ ಕೈಬಿಡುವಂತೆ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎನ್.ಕೆ. ಶ್ಯಾಮಸುಂದರ್ ಒತ್ತಾಯಿಸಿದ್ದಾರೆ.

 ಐದನೇ ರ‌್ಯಾಂಕ್
ನಗರದ ಜ್ಞಾನಗಂಗಾ ವಿದ್ಯಾಸಂಸ್ಥೆಯ ಐದನೇ ತರಗತಿ ವಿದ್ಯಾರ್ಥಿ ಬಿ. ನಿಖಿಲ್ ಈಚೆಗೆ ನಡೆದ ಅಂತರರಾಷ್ಟ್ರೀಯ ವಿಜ್ಞಾನ ಪ್ರತಿಭಾ ಪರೀಕ್ಷೆಯ ಚಿಂತನ ವಿಜ್ಞಾನ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಐದನೇ ರ‌್ಯಾಂಕ್ ಪಡೆದಿದ್ದಾನೆ.

 ತಂದೆ ಎಂ. ಬಸವಣ್ಯಪ್ಪ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿಗಳು ಅಭಿನಂದನೆ ತಿಳಿಸಿದ್ದಾರೆ.

`ಮಲೆನಾಡು ಉತ್ಸವ~ಕ್ಕೆ ಆಹ್ವಾನ
ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಮಲೆನಾಡಿನ ಎಂಟು
ಜಿಲ್ಲೆಗಳನ್ನು ಒಳಗೊಂಡ `ಮಲೆನಾಡ ಉತ್ಸವ-2012~ ಎಂಬ ಜಾನಪದ ಹಬ್ಬವನ್ನು ಮಾರ್ಚ್ 31ರಿಂದ ಏಪ್ರಿಲ್ 6ರವರೆಗೆ ಹಮ್ಮಿಕೊಳ್ಳಲಾಗಿದೆ.

ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು, ಹಾಸನ, ಕೊಡಗು ಈ ಜಿಲ್ಲೆಗಳ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಬಹುದಾಗಿದೆ.

ಆಸಕ್ತ ಜಾನಪದ ಕಲಾ ತಂಡಗಳು ಭಾಗವಹಿಸುವ ಕಲಾವಿದರ ಸಂಖ್ಯೆ, ಕಾರ್ಯಕ್ರಮದ ತಂಡದ ಹೆಸರು, ಫೋನ್ ನಂಬರ್, ಕಾರ್ಯಕ್ರಮದ ಮಾಹಿತಿ ಮುಂತಾದ ವಿವರಗಳೊಂದಿಗೆ ಫೆಬ್ರವರಿ 20ರ ಒಳಗೆ ತಲುಪುವಂತೆ ಅರ್ಜಿ ಸಲ್ಲಿಸಬೇಕು.

ಮಾಹಿತಿಗೆ ಭೋಗಾನಂದ ಮೊಬೈಲ್: 93414 95548/    ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.