ADVERTISEMENT

ತತ್ವಜ್ಞಾನ ನಾಟಕದ ಜೀವಾಳವಾಗಲಿ: ಸ್ವಾಮೀಜಿ

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 10:09 IST
Last Updated 2 ಏಪ್ರಿಲ್ 2013, 10:09 IST
ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ `ಸದಾರಮೆ' ನಾಟಕದ ದೃಶ್ಯ.
ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ `ಸದಾರಮೆ' ನಾಟಕದ ದೃಶ್ಯ.   

ಶಿಕಾರಿಪುರ: ನಾಟಕಗಳಲ್ಲಿ ತಂತ್ರಜ್ಞಾನ ಪ್ರಧಾನವಾಗಿರದೇ ತತ್ವಜ್ಞಾನ ಪ್ರಧಾನವಾಗಿರಬೇಕು ಎಂದು ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ಸೋಮವಾರ 3 ದಿನ ಕಾಲ ನಡೆದ ಸಾಣೇಹಳ್ಳಿ ಶಿವಸಂಚಾರ  ನಾಟಕೋತ್ಸವದ ಸಮಾರೋಪ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಒಂದು ನಾಟಕದ ಮೂಲ ಆಶಯ ಮನುಷ್ಯನ ಮನ ಪರಿವರ್ತನೆ ಮಾಡುವುದಾಗಿದೆ. ಜಾತಿ, ಧರ್ಮ, ಪಕ್ಷ ಬೇಧವನ್ನು ಮರೆತು ಎಲ್ಲರನ್ನು ಒಂದು ಗೂಡಿಸುವ ಶಕ್ತಿ ನಾಟಕದಲ್ಲಿದೆ. ಕಲೆ ಸಾಹಿತ್ಯದಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಹೊರತು ಹಣದಿಂದಲ್ಲ ಎಂದ ಅವರು ರಂಗಭೂಮಿ ಭೂಮಿ ಬೆಳೆಯಲು ಎಲ್ಲರ ಸಹಕಾರ ಮುಖ್ಯವಾಗುತ್ತದೆ ಎಂದರು.

ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ಕಲೆ ಸಾಹಿತ್ಯ ಉಳಿಸಲು ನಾಟಕಗಳು ಸಹಕಾರಿಯಾಗಿದೆ. ಕಲೆ ಸಾಹಿತ್ಯಕ್ಕೆ ಸಾಣೇಹಳ್ಳಿ ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಅಧಿಕಾರವಧಿಯಲ್ಲಿ ಕಲೆ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಬೇಸಗೆ ಮಕ್ಕಳ ರಂಗ ಶಿಬಿರಕ್ಕೂ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
`ಕಾಡಾ' ಮಾಜಿ ಅಧ್ಯಕ್ಷ ಕೆ. ಶೇಖರಪ್ಪ, ರಾಜ್ಯ ಉರ್ದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮೌಲಾನಾ ಅಮ್ಜದ್ ಹುಸೇನ್ ಕರ್ನಾಟಕಿ, ಗುಡಿ ಸಾಂಸ್ಕೃತಿಕ ಕೇಂದ್ರದ  ಸಂಸ್ಥಾಪಕ ಇಕ್ಬಾಲ್ ಅಹ್ಮದ್, ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಹುಚ್ಚರಾಯಪ್ಪ, ಕಲಾವಿದ ಕೊಪ್ಪಲು ಮಂಜಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.