ADVERTISEMENT

ತನಿಖೆಗೆ ಅಕ್ಕಿಗಿರಣಿ ಮಾಲೀಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 9:40 IST
Last Updated 28 ಅಕ್ಟೋಬರ್ 2011, 9:40 IST

ಭದ್ರಾವತಿ: ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಬೆಂಬಲ ಬೆಲೆಗೆ ಖರೀದಿಸಿರುವ ಬತ್ತವನ್ನು ಖಾಸಗಿ ಗೋದಾಮಿನಲ್ಲಿ ಶೇಖರಿಸಿ ಅಕ್ರಮ ಚಟುವಟಿಕೆ ದಾರಿ ಮಾಡಿಕೊಟ್ಟಿದೆ ಎಂದು ತಾಲ್ಲೂಕು ಅಕ್ಕಿಗಿರಣಿ ಮಾಲೀಕರ ಸಂಘ ಆರೋಪಿಸಿದೆ.

ನಿಗಮಕ್ಕೆ ಜಿಲ್ಲೆಯಲ್ಲಿ ಸುಮಾರು ಮೂರು ಗೋದಾಮಿದ್ದರು ಪ್ರತಿ ತಿಂಗಳು ್ಙ 27 ಲಕ್ಷ ಬಾಡಿಗೆಯನ್ನು ನೀಡಿ ಶಿವಮೊಗ್ಗ ಸುರಕ್ಷಾ ಗೋದಾಮಿನಲ್ಲಿ ಭತ್ತ ಶೇಖರಿಸಲು ಅನುಮತಿ ನೀಡಿರುವುದು ಎಷ್ಟು ಸರಿ ಎಂದು ಮಾಲೀಕರು ಕಿಡಿಕಾರಿದ್ದಾರೆ.

ಸರ್ಕಾರದ ಗೋದಾಮಿನ ನಿರ್ವಹಣೆಯನ್ನು ಸ್ವತಃ ನಡೆಸಲು ಮುಂದಾಗಿರುವ ಸುರಕ್ಷಾ ಗೋದಾಮು ಮಾಲೀಕರು ಅದಕ್ಕಾಗಿ ಬಾಡಿಗೆಯನ್ನು ಸಹ ವಸೂಲಿ ಮಾಡುತ್ತಿದ್ದಾರೆ. ಇದರಿಂದ ನಿಗಮಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ಇದೇ ಸಂದರ್ಭದಲ್ಲಿ ದೂರಿದರು.

ಮಾಲೀಕರ ಆರೋಪ: ಬೆಂಬಲ ಬೆಲೆ ನೀತಿ ಅಡಿ ನಿಗಮವು ಜಿಲ್ಲೆಯಲ್ಲಿ 2010-11ನೇ ಸಾಲಿನಲ್ಲಿ ಒಟ್ಟು 2,87,732.75 ಕ್ವಿಂಟಲ್  ಬತ್ತವನ್ನು ಸುರಕ್ಷಾ ವೇರ್ ಹೌಸಿಂಗ್ ಕಾರ್ಪೂರೇಷನ್ ಗೋದಾಮಿನಲ್ಲಿ ಶೇಖರಿಸಲಾಗಿದೆ.

ಇಲ್ಲಿ ಸಂಗ್ರಹಿಸಿದ ಬತ್ತವನ್ನು ಹಲ್ಲಿಂಗ್ ಮಾಡಿ ದೊರೆತ ಅಕ್ಕಿಯನ್ನು ಪಡಿತರ ವ್ಯವಸ್ಥೆ, ಬಿಸಿಯೂಟ ಹಾಗೂ ಇನ್ನಿತರ ಸರ್ಕಾರಿ ಘೋಷಿತ ವ್ಯವಸ್ಥೆಗೆ ಬಳಕೆ ಮಾಡಿಕೊಳ್ಳುವುದು ಪದ್ಧತಿ.

ಇಲ್ಲಿ ಶೇಖರಿಸಿದ ಬತ್ತವನ್ನು ಹಲ್ಲಿಂಗ್ ಮಾಡಲು ಜಿಲ್ಲೆಯ ನಾಲ್ಕು ರೈಸ್‌ಮಿಲ್ ಮಾಲೀಕರು ತಲಾ ್ಙ 20 ಲಕ್ಷ ಭದ್ರತೆಯನ್ನು ಸರ್ಕಾರಕ್ಕೆ ಒದಗಿಸಿ ಟೆಂಡರ್ ಪಡೆದು ಕೆಲಸ ನಡೆಸುತ್ತಿದ್ದರು. ಆದರೆ, ಇದಕ್ಕೆ ಹೊರತಾಗಿ ಯಾವುದೇ ಟೆಂಡರ್ ಪಡೆಯದೇ ಸುರಕ್ಷಾ ಸಂಸ್ಥೆ ನಾಲ್ಕು ಮಿಲ್‌ಗಳನ್ನು ಹಾಕಿಕೊಂಡು ಆ ಮೂಲಕವೇ ಹಲ್ಲಿಂಗ್ ಮಾಡುವ ಕೆಲಸಕ್ಕೆ ಮುಂದಾಗಿದೆ. ಇದರಿಂದಾಗಿ ಸರ್ಕಾರಿ ಟೆಂಡರ್ ಪಡೆದ ಗಿರಿಣಿಗಳು ತೊಂದರೆ ಅನುಭವಿಸುತ್ತಿವೆ.

ಇದಲ್ಲದೇ ಈ ಗೋದಾಮು ರೈತರಿಂದ ನೇರವಾಗಿ ಬತ್ತ ಖರೀದಿ ಮಾಡದೆ, ನಕಲಿ ಪಹಣಿ ಹೊಂದಿದ ವರ್ತಕರಿಂದ ಖರೀದಿ ನಡೆಸಿದೆ. ಗೋದಾಮಿನಲ್ಲಿರುವ ದಾಸ್ತಾನು ಕುರಿತಾದ ನಿಖರವಾದ ಮಾಹಿತಿ ಸಹ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಇಲ್ಲ. ಪ್ರತಿಯೊಂದು ವಿವರಕ್ಕೂ ಗೋದಾಮು ಮಾಲೀಕರ ಬಳಿ ಅರ್ಜಿ ಸಲ್ಲಿಸುವ ಸ್ಥಿತಿ ಒದಗಿದೆ. ಹೀಗಾಗಿ ಉತ್ತಮ ಗುಣಮಟ್ಟದ ಅಕ್ಕಿ ಪೂರೈಕೆ ಕನಸಿನ ಮಾತಾಗಿದೆ ಎಂಬುದು ಮಾಲೀಕರ ದೂರು.

ಕ್ರಮಕ್ಕೆ ಆಗ್ರಹ: ಬೆಂಬಲ ಬೆಲೆ ನೀತಿ ಅಡಿ ಖರೀದಿಸಿದ ಬತ್ತದ ದಾಸ್ತಾನು ಹಾಗೂ ಅದರ ವಿತರಣಾ ವ್ಯವಸ್ಥೆಯಲ್ಲಿ ಅಡಗಿರುವ ಆರೋಪ ಸಾಬೀತಾಗಲು ಸಮಗ್ರ ತನಿಖೆ ಅವಶ್ಯವಿದೆ. ಹಾಗಾಗಿ, ಜಿಲ್ಲಾಧಿಕಾರಿ ಖಾಸಗಿ ಗೋದಾಮಿನ ವ್ಯವಹಾರದ ಬ್ಯಾಂಕ್ ಖಾತೆ ಹಾಗೂ ಇನ್ನಿತರ ವಿಚಾರಗಳ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂದು ಮಾಲೀಕರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

 ರೈಸ್‌ಮಿಲ್ ಮಾಲೀಕರ ಸಂಘದ ಎನ್‌ಟಿಸಿ ನಾಗೇಶ್, ಶೈಲೇಂದ್ರ, ಶ್ರೀನಿವಾಸ್, ಚಂದ್ರಶೇಖರ ಕೋಠಿ, ಹರೀಶ್ ಬಾಬು, ದಿಲೀಪ್, ಸೈಯದ್ ಅಹಮದ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.